ಜಾಡಮಾಲಿ ಪದ ಬಳಸಬಾರದು : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಜಾಡಮಾಲಿ ಪದ ಬಳಸಬಾರದು : ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಎಲ್ಲಾ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿಡುವ ಮೂಲಕ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುವ ಸ್ವಚ್ಛತಾ ನೌಕರರ ಬಗ್ಗೆ ಇನ್ನುಮುಂದೆ ‘ಜಾಡಮಾಲಿ’ ಪದ ಬಳಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ತಾವು ಕಳೆದ 14ರಿಂದ 34 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ನೌಕರರಾಗಿ (ಸ್ವೀಪರ್ ಉದ್ಯೋಗ) ಸೇವೆ ಸಲ್ಲಿಸಿದ್ದು, ತಮ್ಮ ಸೇವೆ ಕಾಯಂಗೊಳಿಸುವAತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಮೇಶ್ ಬಾಬು ಮತ್ತಿತರ ಸ್ವಚ್ಛತಾ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ಸ್ವಚ್ಛತಾ ನೌಕರರು ಎಂಬುದಾಗಿಯೇ ಬಳಸಿ: ಅಲ್ಲದೇ, ಈ ರೀತಿಯ ಪದಗಳನ್ನು ಕೇಳಿದರೆ ನೋವಾಗುತ್ತದೆ. ಇವು ಸಂತೋಷ ತರಿಸುವಂತಹ ಪದನಾಮಗಳು (ಡಿಸಿಗ್ನೇಷನ್) ಅಲ್ಲ. ಹಾಗಾಗಿ, ಎಲ್ಲಾ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿ ಇಡುವ ಮೂಲಕ ಸ್ವಚ್ಛತಾ ನೌಕರರು ಸಮಾಜಕ್ಕೆ ಅಮೂಲ್ಯವಾದ ಸೇವೆ ಸಲ್ಲಿಸುತ್ತಾರೆ. ಅಂತಹ ಒಂದು ವರ್ಗದ ನೌಕರರನ್ನು ಉದ್ದೇಶಿಸಿ ಬಳಸುವ ಪದ ಗೌರವದಿಂದ ಕೂಡಿರಬೇಕು. ಹಾಗಾಗಿ, ಸರ್ಕಾರ ಇನ್ನು ಮುಂದೆ ಜಾಡಮಾಲಿ ಪದದ ಬದಲಾಗಿ ಸ್ವಚ್ಛತಾ ನೌಕರರು ಎಂಬುದಾಗಿಯೇ ಬಳಸುವುದು ಸೂಕ್ತ ಎಂದು ಪೀಠ ಸೂಚಿಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಜಾಡಮಾಲಿ ಪದ ಬದಲಾಗಿ ಸ್ವಚ್ಛತಾ ಕಾರ್ಮಿಕರು ಎಂಬ ಪದವನ್ನು ಬಳಸಲು ಸರ್ಕಾರದ ಎಲ್ಲಾ ಅಧಿಕಾರಿಗಳಿಗೆ ಸಲಹೆ ನೀಡುವುದಾಗಿ ನ್ಯಾಯಪೀಠಕ್ಕೆ ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ಪೀಠ, ವಿಚಾರಣೆ ಮುಂದೂಡಿತು.

ಸೇವೆಯಿAದ ವಜಾ ಮಾಡಿದ್ದ ಪೊಲೀಸ್ ಇಲಾಖೆ: ಅರ್ಜಿದಾರರು ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಕಳೆದ ಹಲವು ದಶಕಗಳಿಂದ ಸ್ವೀಪರ್ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, 2018ರಲ್ಲಿ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿತ್ತು. ಅವರ ಉದ್ಯೋಗಕ್ಕೆ ಗುತ್ತಿಗೆ ಆಧಾರದಲ್ಲಿ ಅರೆಕಾಲಿಕ ನೌಕರರನ್ನು ನೇಮಿಸಲು ಪೊಲೀಸ್ ಇಲಾಖೆ ನಿರ್ಧರಿಸಿತ್ತು.ಸೇವೆ ಕಾಯಂಗೊಳಿಸಲು ಕೋರಿಕೆ: ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣವು 2021ರಲ್ಲಿ ವಜಾಗೊಳಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದು, ತಮ್ಮ ಸೇವೆ ಕಾಯಂಗೊಳಿಸಲು ಮತ್ತು ಸೇವಾ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.

ಈ ಹಿಂದೆ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿದಾರರನ್ನು ಉದ್ಯೋಗದಿಂದ ತೆಗೆಯುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಉದ್ಯೋಗ ಮುಂದುವರೆಸಲು ಅವರಿಗೆ ಅನುಮತಿಸಬೇಕು ಮತ್ತು ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.

ಈ ನಡುವೆ ದಾಖಲೆಗಳ ಪರಿಶೀಲಿಸಿದ ನ್ಯಾಯಪೀಠ, ಜಾಡಮಾಲಿ ಪದ ಬಳಕೆಗೆ ಅಸಮಾಧಾನ ವ್ಯಕ್ತಪಡಿದೆ. ಅಲ್ಲದೆ, ಈ ರೀತಿಯ ಪದ ಬಳಕೆ ಮಾಡದಂತೆ ನಿರ್ದೇಶನ ನೀಡಿತು.

Leave a Reply

Your email address will not be published. Required fields are marked *