ಮೈಸೂರು: ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಿದೆ. ಸಿಎಂ ಬದಲಾವಣೆ ಬಗ್ಗೆ ಮಹತ್ವದ ಮಾಹಿತಿಯನ್ನು ಮೈಸೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ನೀಡಿದ್ದಾರೆ.
ಈ ಕುರಿತು ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರ ಜೊತೆಗೆ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಯಾವತ್ತೂ ಕೂಡ ಪಾರ್ಟಿಯಲ್ಲಿ ಮಾತನಾಡಿಲ್ಲ, ಬಿಜೆಪಿಯವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೇ ಹೊಟ್ಟೆ ಕಿಚ್ಚು ಅಂತ ಹೇಳಿದರು.
ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗಳ ಪರಿಷ್ಕರಣೆ ಹಾಗೂ ಗ್ಯಾರಂಟಿಗಳಿಗೂ ಸಂಬಂಧವಿಲ್ಲ. ಈಗಾಗಲೇ ಸರ್ಕಾರಿ ನೌಕರರು, ಎರಡು ಕಾರು ಹೊಂದಿರುವವರು, ತೆರಿಗೆ ಕಟ್ಟುತ್ತಿದ್ದವರು, 3 ಹೆಕ್ಟೇರ್ ಗಿಂತ ಹೆಚ್ಚು ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಗಳನ್ನು ಬಳಸುತ್ತಿದ್ದಾರೆ. ಇಂಥವರು ತಾವೇ ಸ್ವತಃ ಕಾರ್ಡ್ ಗಳನ್ನು ವಾಪಸ್ ನೀಡಬೇಕಿತ್ತು ಎಂದು ತಿಳಿಸಿದ್ದಾರೆ. ಈಗಾ ನಾವು ಕಾರ್ಡ್ ಗಳನ್ನು ಪರಿಷ್ಕರಣೆ ಮಾಡುವ ಪರಿಸ್ಥಿತಿ ಬಂದಿದೆ. ಈ ಕೆಲಸ ಮುಂಚೆನೇ ಮಾಡಬೇಕಾಗಿತ್ತು. ತಡವಾದರೂ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಕೆಲ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆ ಮೂಲಕ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮೆಡಿಕಲ್ ಶಾಪ್’ನಲ್ಲಿ ಮಾತ್ರೆ ಮೂಲಕ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ. ಹೊರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆ. ಮಾದಕ ವಸ್ತುಗಳನ್ನು ಸೇಲ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಡ್ರಗ್ಸ್ ಮಾರುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಆನೇಕಲ್ ಭಾಗದಲ್ಲಿ ಪೊಲೀಸರು ಹೆಚ್ಚು ರೈಡ್ ಮಾಡುತ್ತಿದ್ದಾರೆ. ಬೇರೆ ರಾಜ್ಯದಿಂದ ರಾಜ್ಯಕ್ಕೆ ಡ್ರಗ್ಸ್ ಬರುತ್ತಿದ್ದುದನ್ನು ಪೊಲೀಸರು ಹಿಡಿದಿದ್ದಾರೆ. ಮೆಡಿಕಲ್ ಶಾಪ್ ಗಳ ಮೇಲೆ ಪೊಲೀಸರು ಸರ್ಚ್ ಮಾಡುತ್ತಿದ್ದಾರೆ.ಡ್ರಗ್ಸ್ ಮೇಲೆ ವಾರ್ ಡಿಕ್ಲೇರ್ ಮಾಡಿದ್ದೇವೆ, ಬಹಳಷ್ಟು ಜನರ ಮೇಲೆ ಕೇಸ್ ಹಾಕಿದ್ದೇವೆ. ಹೊರ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಲವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನು ಹೈ ಕಮಿಷನ್ ಹಾಗೂ ರಾಯಭಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ಡ್ರಗ್ಸ್ ಮಾರಾಟ ಇದೆ. ಎಲ್ಲಾ ಕಡೆಗಳಲ್ಲಿ ಡ್ರಗ್ಸ್ ಸ್ಪಾನ್ಸರ್ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪೋರ್ಟ್ ಮೂಲಕ ಸಿಕ್ಕಾಪಟ್ಟೆ ಬರುತ್ತಿದೆ, ಪ್ರತಿನಿತ್ಯ ರೈಡ್ ನಡೆಯುತ್ತಿದೆ. ಯಾವ ಯಾವುದೋ ರೂಪದಲ್ಲಿ ತರುತ್ತಿದ್ದಾರೆ. ಬಾಡಿಯಲ್ಲಿಟ್ಟು ಡ್ರಗ್ಸ್ ತರುತ್ತಿದ್ದಾರೆ, ಏರ್ ಪೋರ್ಟ್ ನಲ್ಲಿ ಎಚ್ಚರ ವಹಿಸಬೇಕು. ವಿಶಾಖಪಟ್ಟಣಂದಲ್ಲಿ ಒಂದುವರೆ ಸಾವಿರ ಕೆ ಜಿ ಡ್ರಗ್ಸ್ ಹಿಡಿದಿದ್ದಾರೆ ಎಂದು ಪರಮೇಶ್ವರ್ ಅವರು ಹೇಳಿದರು.
ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಪರಮೇಶ್ವರ್ ಅವರು ಮಾತನಾಡಿ, ಜಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷರೆ ಹೇಳಿದ್ದಾರೆ. ಕೆ.ಪಿ.ಸಿ.ಸಿ.ಅಧ್ಯಕ್ಷರು ಬೇಕಾದರೆ ಪಕ್ಷದ ಶಿಸ್ತು ಪಾಲನ ಸಮಿತಿಗೆ ವರದಿ ಕೊಟ್ಟರೆ ಶಿಸ್ತುಪಾಲನ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು.ನಾನು ಈ ಹಿಂದೆ ಎಐಸಿಸಿ ಶಿಸ್ತು ಪಾಲನ ಸಮಿತಿ ಸದಸ್ಯನಾಗಿದ್ದೆ, ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನ ಅವರು ಎಷ್ಟೆ ದೊಡ್ಡವರಿದ್ದರು ನೋಟಿಸ್ ಕೊಟ್ಟು ಕರೆಸುತ್ತಿದ್ದೇವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು.
ಕೆಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನ ಸಮಿತಿ ಗಮನಕ್ಕೆ ಈ ವಿಚಾರ ತರಬಹುದು. ಜಮೀರ್ ಹೇಳಿಕೆಯಿಂದ ಸ್ವಲ್ಪ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದ ಪಕ್ಷದ ನಾಯಕರೆ ಹೇಳಿದ್ದಾರೆ ಎಂದು ಜಮೀರ್ ಅಹ್ಮದ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಪರೋಕ್ಷವಾಗಿ ಗೃಹ ಸಚಿವ ಪರಮೇಶ್ವರ್ ಅವರು ಹೇಳಿದರು.
40% ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ ಎಂದ ಲೋಕಯುಕ್ತ ತನಿಖೆ ವಿಚಾರವಾಗಿ ಮಾತನಾಡಿ, ನಾವು ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು, ನಮಗೆ ಅದೇ ದಾಖಲೆ. ಈಗ ಲೋಕಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂಬುದನ್ನು ನಾವು ನೋಡಬೇಕಿದೆ. ಅಗತ್ಯವಿದ್ದರೆ ಮತ್ತೆ ಅದನ್ನು ಮರು ತನಿಖೆಗೆ ಒಳಪಡಿಸಲು ನಾವು ಸಿದ್ದ. ಮೊದಲು ನಾವು ಲೋಕಯುಕ್ತರ ವರದಿ ಓದುತ್ತೇನೆ, ನಂತರ ಅದರ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.