ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು. ಇದೀಗ ಕೊಲೆ ಯತ್ನ ಸಾರ್ವಜನಿಕ ಆಸ್ತಿ ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸದಸ್ಯೆ ಸುವರ್ಣಾ ಕಲ್ಲಕುಂಟ್ಲ ಸೇರಿ 11 ಜನರಿಗೆ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸುವರ್ಣಾ ಕಲ್ಲಕುಂಟ ಹಾಗೂ ಲಾಜರಸ್ ಲುಂಜಾಲ, ಸ್ಯಾಮಸಂಗ್ ಲುಂಜಾಲ, ಶಶಿಧರ ರಾಥೋಡ, ಸುಶಾ ಅಲಿಯಾಸ್ ಸುಶೆರಾಜ, ಮೇರಿಯಮ್ಮ ಲುಂಜಾಲ, ನಿರ್ಮಲಾ ಜಂಗಮ, ಯೋಗರಾಜ ಪೂಜಾರ ಹಾಗೂ ರಾಜು ಕೊಂಡಯ್ಯ ಆರ್ಯ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರಿಗೆಲ್ಲ ಐಪಿಸಿ 307ರ ಅಡಿ 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಅಲ್ಲದೇ 326ರಡಿ 2 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, 324ರಡಿ 2 ವರ್ಷ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 323ರಡಿ 6 ತಿಂಗಳು ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, 448ರಡಿ 6 ತಿಂಗಳು ಶಿಕ್ಷೆ ಹಾಗೂ 500 ರೂ. ದಂಡ, 506ರಡಿ 2 ವರ್ಷ ಶಿಕ್ಷೆ ಹಾಗೂ ಸಾವಿರ ರೂ. ದಂಡ, 143ರಡಿ 6 ತಿಂಗಳು ಶಿಕ್ಷೆ ಹಾಗೂ ದಂಡ ವಿಧಿಸಿದೆ. ದಂಡ ತುಂಬಲು ತಪ್ಪಿದ್ದಲ್ಲಿ ಸಾಧಾರಣ ಶಿಕ್ಷೆಯನ್ನು ಸಹ ಕೋರ್ಟ್ ವಿಧಿಸಿದೆ.
ಇಬ್ಬರು ಅಪರಾಧಿಗಳಾದ ಅಬ್ರಾಹಂ ಲುಂಜಾಲ ಹಾಗೂ ಶ್ರೀಧರ ರಾಥೋಡ ಮೃತಪಟ್ಟಿದ್ದು. ಶಬ್ಬಿರ ಶೇಖ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ದಂಡದ ಮೊತ್ತ ಪೈಕಿ 50 ಸಾವಿರ ರೂಪಾಯಿ ಪ್ರಮುಖ ಗಾಯಾಳುಗಳಿಗೆ ಹಾಗೂ ತಲಾ 25 ಸಾವಿರ ರೂ. ಉಳಿದ ಗಾಯಾಳುಗಳಿಗೆ ನೀಡಬೇಕು. ಹೆಚ್ಚಿನ ಪರಿಹಾರಕ್ಕಾಗಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿ ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಏನಿದು ಪ್ರಕರಣ ಹಳೇ ದ್ವೇಷದ ಹಿನ್ನೆಲೆಯಲ್ಲಿ 2010ರ ಆಗಸ್ಟ್ 21ರಂದು ಕೇಶ್ವಾಪುರದ ಗಾಂಧಿವಾಡದ ಶಂಷಾದ್ ಮುನಗೇಟಿ, ರೀನಾ ಲಾಜರಸ ದಮ್ಮು, ರುತ್ ಲಾಜರಸ ದಮ್ಮು, ಸ್ಯಾಮುವೇಲ್ ಮುನಿಗೇಟಿ, ಪ್ರವೀಣಕುಮಾರ ವೇಲಂ, ಚಂದ್ರಕಲಾ ಮುನಿಗೇಟಿ, ದಿವ್ಯಾಕುಮಾರಿ ಮುನಿಗೇಟಿ, ದೇವರಾಜ ಮುನಿಗೇಟಿ, ದೇವಕುಮಾರಿ ಕಲ್ಲಕುಂಟ್ಲ, ಜಾಸ್ಮಿನ್ ಮುನಿಗೇಟಿ ಅವರ ಮನೆಗೆ ರಾತ್ರಿ ಏಕಾಏಕಿ ನುಗ್ಗಿ ಮಚ್ಚು, ರಾಡ್, ಬಡಿಗೆಯಿಂದ ಹಲ್ಲೆ ಮಾಡಲಾಗಿತ್ತು ಎನ್ನುವ ಆರೋಪ ಇದೆ.
ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಲಾಗಿತ್ತು. ದೊಂಬಿ ಎಬ್ಬಿಸುವ ಉದ್ದೇಶದಿಂದಲೇ ಗುಂಪು ಸಾಗುವ ಹಾದಿಯಲ್ಲಿನ ಬೀದಿದೀಪಗಳನ್ನು ಒಡೆದು ಹಾಕಲಾಗಿತ್ತು. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ಗಳಾದ ಬಿ.ಟಿ. ಬದ್ದಿ, ಅಬ್ದುಲ್ ರಹಿಮಾನ, ಬಿ.ಎನ್. ಅಂಬಿಗೇರ ಸಮಗ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪರಮೇಶ್ವರ ಪ್ರಸನ್ನ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಅಭಿಯೋಜಕಿಯಾಗಿದ್ದ ಗಿರಿಜಾ ತಮ್ಮಿನಾಳ ಭಾಗಶಃ ವಾದ ಮಾಡಿದ್ದರು. ಈಗಿನ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ವಾದ ಪೂರ್ಣಗೊಳಿಸಿದ್ದರು.