ಹುಬ್ಬಳ್ಳಿ: ಗೋವಾ ರಾಜ್ಯಕ್ಕೆ ಹೆದರಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿ ಮಹದಾಯಿಗೆ ಅನುಮತಿ ಕೊಡಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಪಿ.ಎಸ್.ಸಿ ಯಲ್ಲಿ ಅವ್ಯವಸ್ಥೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಗೆ ಸಿಡಿಮಿಡಿಗೊಂಡ ಸಿಎಂ, ಪ್ರಲ್ಹಾದ್ ಜೋಶಿ ಮೊದಲು ಮಹದಾಯಿ ಬಗ್ಗೆ ಮಾತಾಡಲಿ ಎಂದು ಕಿಡಿಕಾರಿದರು.
ಮಹದಾಯಿ ಯೋಜನೆಗೆ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಯಾಕೆ ಕೊಡಿಸ್ತಿಲ್ಲಾ.. ಗೋವಾಕ್ಕೆ ಹೆದರಿಕೊಂಡು ಮೋದಿ ಅವರು ಅನುಮತಿ ಕೊಡಿಸ್ತಿಲ್ಲಾ. ಪ್ರಲ್ಹಾದ್ ಜೋಶಿ ಆ ಬಗ್ಗೆ ಪ್ರಧಾನಿ ಮೋದಿ ಮುಂದೆ ಮಾತಾಡ್ತಿಲ್ಲಾ. ನಾವು ಅನೇಕ ಸಲ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಹಿನ್ನೆಲೆ ಮೇ 20ಕ್ಕೆ ವಿಜಯನಗರ ದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದೇವೆ. ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ಜನಾಕ್ರೋಶ ಯಾತ್ರೆ ವಿರುದ್ಧ ಸಿಎಂ ಕಿಡಿ: ಇದಕ್ಕೂ ಮುನ್ನ ಬಿಜೆಪಿಯವರು ರಾಜ್ಯದಲ್ಲಿ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಕುರಿತು ಭಾನುವಾರ ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ್ದ ಸಿಎಂ, ಬಿಜೆಪಿಯವರಿಗೆ ನಾಚಿಕೆ, ಮರ್ಯಾದೆ ಇದ್ದರೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಅಚ್ಚೇದಿನ್ ಬಂದಿದಾವಾ?. ಅಮೆರಿಕನ್ ಡಾಲರ್ಗೆ ಸಮನಾಗಿ ರೂಪಾಯಿಯನ್ನು ತಂದು ಬಿಡ್ತೀನಿ ಅಂದ್ರು. ಈಗ ಡಾಲರ್ ಬೆಲೆ 86 ರೂಪಾಯಿ ಇದೆ ಎಂದರು.
ಚಿನ್ನದ ಬೆಲೆ ಏರಿಕೆಗೆ ಹೇಳಿದ್ದು ಹೀಗೆ: 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ. ಆಗಿದೆ. ಬಡವರು ತಾಳಿ ಮಾಡಿಸಿಕೊಳ್ಳೋಕೆ ಆಗುತ್ತಾ?. ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಅಂತ ಮೋದಿಜಿ ಹೇಳಿದ್ರು. ಆದರೆ, ನಮ್ಮನ್ನೇ ವಿವಿಧ ರಾಜ್ಯಗಳಲ್ಲಿ ಕಾಪಿ ಹೊಡೆದರು ಎಂದು ಟೀಕಿಸಿದರು.
ಜಿಎಸ್ಟಿ ಕಟ್ಟೋದ್ರಲ್ಲಿ ಮಹಾರಾಷ್ಟ್ರದ ಬಳಿಕ ಕರ್ನಾಟಕ ನಂಬರ್ 2 ಸ್ಥಾನದಲ್ಲಿದೆ. ನಾವ್ ದಿವಾಳಿ ಆಗಿಬಿಟ್ಟಿದ್ದೀವಾ? ಏನ್ರೀ ನರೇಂದ್ರ ಮೋದಿಜಿ? ಎಂದು ಪ್ರಶ್ನಿಸಿದ್ದರು.