ನನಗೆ ಹೋಮ್ ಮಿನಿಸ್ಟರ್ ಖಾತೆ ಬೇಡ ಎಂದ್ರಾ Parameshwara? || ಪರಂ ಹೇಳಿದ್ದೇನು..?

ನನಗೆ ಹೋಮ್ ಮಿನಿಸ್ಟರ್ ಖಾತೆ ಬೇಡ ಎಂದ್ರಾ Parameshwara? || ಪರಂ ಹೇಳಿದ್ದೇನು..?

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಗೃಹ ಸಚಿವ ಪರಮೇಶ್ವರ್ಗೆ ತಿಳಿಸದೇ ಈ ಆರ್ಸಿಬಿ ವಿಜಯೋತ್ಸವನ್ನು ಸಿಎಂ, ಡಿಸಿಎಂ ನಡೆಸಿದ್ರು ಎನ್ನುವ ಮಾತು ಕೇಳಿ ಬರ್ತಿದೆ. ಗೃಹ ಸಚಿವರಿಂದ ಈ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆದಿದೆ ಎನ್ನಲಾಗ್ತಿದೆ. ಪರಮೇಶ್ವರ್ ಅವರು ಕಾಲ್ತುಳಿತ ಘಟನೆಗೂ ನನಗೂ ಸಂಬಂಧವಿಲ್ಲ ಎಲ್ಲಾ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಪರಮೇಶ್ವರ್ ನನಗೆ ಗೃಹ ಖಾತೆ ಬೇಡ ಅಂತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇದಕ್ಕೆ ಪರಮೇಶ್ವರ್ ಹೇಳಿದ್ದೇನು?

ಯಾರ್ರೀ ಹೇಳಿದ್ದು ಇದನ್ನೆಲ್ಲಾ- ಪರಂ ಗರಂ

ಗೃಹ ಖಾತೆ ಬೇಡ ಎಂಬ ಸುದ್ದಿ ಹರಡುತ್ತಿರುವ ವಿಚಾರಕ್ಕೆ ಮಾಧ್ಯಮಗಳ ಮೇಲೆ ಡಾ. ಜಿ ಪರಮೇಶ್ವರ್ ಗರಂ ಆಗಿದ್ದಾರೆ. ನಿಮಗೆ ಏನು ಹೇಳಬೇಕು ಗೊತ್ತಿಲ್ಲ. ಯಾರು ಇದನ್ನೆಲ್ಲಾ ಹೇಳಿದ್ದಾರೆ ಗೊತ್ತಿಲ್ಲ. ಯಾರು ಹೀಗಂತ ಹೇಳಿದ್ದಾರೆ ಅಂತ ಮೊದಲು ಹೇಳಿ ಎಂದು ಕೋಪದಲ್ಲಿ ಉತ್ತರಿಸಿದ್ದಾರೆ.

ಯಾರು ಏನೇ ಹೇಳಲಿ. ನೀವು ನನ್ನ ಬಳಿ ನೇರವಾಗಿ ಬಂದು ಕೇಳಿ. ನಾನು ಸಂಯಮದಿಂದಲೇ ನಡೆದುಕೊಂಡಿದ್ದೇನೆ. ಈ ರೀತಿ ಒಬ್ಬರ ವ್ಯಕ್ತಿತ್ವವನ್ನ ಕೊಲೆ ಮಾಡಬಾರದು, ಇದು ಸರಿ ಅನ್ಸೋದಿಲ್ಲ. ಯಾರಿಗೂ ಶೋಭೆ ತರೋದಿಲ್ಲ, ನನ್ನನ್ನೇ ಕೇಳಿ, ನಾನು ಉತ್ತರ ಕೊಡುತ್ತೇನೆ ಎಂದ್ರು.

ನನ್ನ ಶ್ರೀಮತಿ ಅವರ ಬಳಿಯೂ ನಾನು ಪಾಲಿಟಿಕ್ಸ್ ಬಗ್ಗೆ ಮಾತಾಡೋದಿಲ್ಲ. ನಾನೇ ನನಗೆ ಖಾತೆ ಬದಲಾಯಿಸಿ ಅಂತ ಸಿಎಂ ಅವರ ಬಳಿ ಹೇಳಿದ್ದೇನೆ ಅಂತ ಯಾರೀ ಹೇಳಿದ್ರು? ಮಾಧ್ಯಮಗಳಲ್ಲಿ 2-3 ದಿನದಿಂದ ಬರ್ತಿದೆ. ಈಗ ಬಂದು ಕ್ಲಾರಿಫೈ ಕೊಡಿ ಅಂದ್ರೆ ಹೇಗೆ? ದಯಮಾಡಿ, ಈ ರೀತಿ ಮಾಡ್ಬೇಡಿ ಎಂದು ಪರಮೇಶ್ವರ್ ಹೇಳಿದ್ದಾರೆ.

ನಮ್ಮ ಅಭಿಮಾನಿಗಳು, ಮತದಾರರು ಇದ್ದಾರೆ. ಅವರೆಲ್ಲಾ ಏನು ಅಂದು ಕೊಳ್ತಾರೆ. ಏನೇ ಇದ್ದರೂ ನನ್ನನ್ನ ಕೇಳಿ, ನಾನು ಯಾರ ಬಳಿಯೂ ಆ ಖಾತೆ, ಈ ಖಾತೆ ಬೇಕು ಎಂದು ನಾನು ಯಾವಾಗಲೂ ಕೇಳಿಲ್ಲ ಎಂದ್ರು. ಇನ್ನು ಬೆಂಗಳೂರಿನಲ್ಲಿ ಇಂಥಹ ಘಟನೆ ಆಗಬಾರದಿತ್ತು. ಇದಕ್ಕೆ ಎಲ್ಲರೂ ಕೂಡ ನೋವು ಅನುಭವಿಸುತ್ತಿದ್ದೇವೆ. ಇದು ಒಂದು ದೊಡ್ಡ ಸವಾಲು, ಇದನ್ನ ಎದುರಿಸ್ಬೇಕು ಅಷ್ಟೇ ಎಂದು ಪರಮೇಶ್ವರ್ ಹೇಳಿದ್ರು.

Leave a Reply

Your email address will not be published. Required fields are marked *