ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿ.ಡಬ್ಲ್ಯೂ.ಎಸ್.ಎಸ್.ಬಿ) ಹಾಗೂ ಬೆಸ್ಕಾಂ ಇಲಾಖೆಗಳಿಂದ ಸಂಪರ್ಕ ಪಡೆಯಲು ಬಿಬಿಎಂಪಿ ಯಿಂದ ಕಟ್ಟಡಗಳ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ. ಇದರ ಪ್ರಕಾರ ಇನ್ಮುಂದೆ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು & ಒಳಚರಂಡಿ ಸಂಪರ್ಕ ಸಿಗಲಿದೆ. ಯಾಕೆ ಈ ಬದಲಾವಣೆ ಹಾಗೂ ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದೇನು ಅಂತ ನೋಡೋಣ

ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕೋರಿ ಸುಮಾರು 66,400 ಸಂಪರ್ಕಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಮಾಹಿತಿ ಇರುತ್ತದೆ. ಘನ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:14605/2024 (WC ಸಂಖ್ಯೆ:46342/2013 ರ ಪ್ರಕರಣದಲ್ಲಿ) ದಿನಾಂಕ:17-12-2024 ರಂದು ನೀಡಿರುವ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು / ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂದುವರಿದು ಘನ ಸರ್ವೋಚ್ಚ (ಸುಪ್ರೀಂ ಕೋರ್ಟ್) ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿ ಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ / ಸಲ್ಲಿಸುವ ವಿವರಗಳನ್ನು ಪಡೆಯಲು ಬಿಬಿಎಂಪಿಯಿಂದ SMS ಮತ್ತು ದೂರವಾಣಿ ಕರೆ ಮುಖಾಂತರ ವಿದ್ಯುತ್ ಸಂಪರ್ಕಕ್ಕಾಗಿ ಬಾಕಿ ಇರುವ ಅರ್ಜಿದಾರರನ್ನು ಸಂಪರ್ಕಿಸಲಾಗುವುದು ಎಂದು ಹೇಳಲಾಗಿದೆ.
ಅಲ್ಲದೇ ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಲು ಹಾಗೂ ಈ ಕೆಳಕಂಡ ಆನ್ಲೈನ್ ಲಿಂಕ್ ನಲ್ಲಿ ನೊಂದಾಯಿತ Architect/ Engineer ಗಳ ಮುಖಾಂತರ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಬೆಂಗಳೂರು ಸಾರ್ವಜನಿಕರನ್ನು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಕೋರಿದ್ದಾರೆ. ಇದಕ್ಕಾಗಿ ಕಟ್ಟಡ ಮಾಲೀಕರು https://bpas.bbmpgov.in/BPAMSClient4/Default.aspx ಗೆ ಭೇಟಿ ನೀಡಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.