ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಆರಂಭ ತುಸು ವಿಳಂಬವಾಗಲಿದೆ. ಈ ವರ್ಷದೊಳಗೆ ಗಗನಯಾನ ಮಿಷನ್ ಚಾಲನೆಗೊಳ್ಳಬೇಕೆಂದು ಮೊದಲಿಗೆ ಗುರಿ ಇಡಲಾಗಿತ್ತು. ಬೇರೆ ಬೇರೆ ಕಾರಣಗಳಿಗೆ ತುಸು ತಡವಾಗಿ ಆರಂಭವಾಗುವ ಸಾಧ್ಯತೆ ಇದೆ. ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ ಜನವರಿಯಲ್ಲಿ (2026) ಗಗನಯಾನ ಮಿಷನ್ನಲ್ಲಿ ಮೊದಲ ಸ್ಪೇಸ್ಫ್ಲೈಟ್ ಹಾರಬಹುದು.
ಅಮೆರಿಕದ ನಾಸಾ ಸಂಸ್ಥೆ ಬಾಹ್ಯಾಕಾಶದಲ್ಲಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ (ಐಎಸ್ಎಸ್) ಅನ್ನು ನಿರ್ಮಿಸಿದ ರೀತಿಯಲ್ಲಿ ಭಾರತವೂ ಕೂಡ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ (ಭಾರತೀಯ ಅಂತರಿಕ್ಷ ನಿಲ್ದಾಣ) ನಿರ್ಮಿಸುವ ಯೋಜನೆಯನ್ನು 2028ಕ್ಕೆ ಆರಂಭಿಸುವ ನಿರೀಕ್ಷೆ ಇದೆ. 2027ಕ್ಕೆ ಮಾನವಸಹಿತ ಗಗನಯಾನ ಯೋಜನೆಯನ್ನು ನಡೆಸುವ ಗುರಿ ಇಟ್ಟಿದೆ. ಅಷ್ಟರೊಳಗೆ ಮಾನವರಹಿತವಾದ ಮೂರು ಸ್ಪೇಸ್ಫ್ಲೈಟ್ ಕೈಗೊಳ್ಳಲಾಗುತ್ತದೆ.
2027ಕ್ಕೆ ಗಗನಯಾನದಲ್ಲಿ ಮನುಷ್ಯರನ್ನು ಕಳುಹಿಸುವ ಮುನ್ನ ಈ ಮೂರೂ ಮಾನವರಹಿತ ಮಿಷನ್ ಪೂರ್ಣಗೊಳಿಸಲಾಗುತ್ತದೆ. ಅದಕ್ಕಾಗಿ, ವ್ಯೋಮಿತ್ರ ಎನ್ನುವ ಮಾನವ ರೂಪದ ರೋಬೋವನ್ನು ನಿರ್ಮಿಸಲಾಗಿದೆ. ಈ ಮೂರೂ ಮಿಷನ್ಗಳಲ್ಲಿ ವ್ಯೋಮಿತ್ರ ಪ್ರಯಾಣಿಸಲಿದ್ದು, ಬಾಹ್ಯಾಕಾಶದಲ್ಲಿ ಮನುಷ್ಯರ ಇರುವಿಕೆಗೆ ಇಷ್ಟ ಕಷ್ಟವಾಗುವ ಅಂಶಗಳೇನು ಎಂಬುದನ್ನು ಈ ವ್ಯೋಮಿತ್ರ ಸಹಾಯದಿಂದ ವಿವಿಧ ಪ್ರಯೋಗಗಳ ಮೂಲಕ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತದೆ. ಮನುಷ್ಯರ ಪ್ರಯಾಣ ನೂರಕ್ಕೆ ನೂರು ಸುರಕ್ಷಿತ ಎಂಬುದು ಖಾತ್ರಿಯಾದ ಬಳಿಕವಷ್ಟೇ ಮಾನವಸಹಿತ ಗಗನಯಾನ ಮಿಷನ್ ಕೈಗೊಳ್ಳಲಾಗುತ್ತದೆ.
ಇಸ್ರೋ ಛೇರ್ಮನ್ ವಿ ನಾರಾಯಣನ್ ಇತ್ತೀಚೆಗೆ ನೀಡಿದ ಮಾಹಿತಿ ಪ್ರಕಾರ, ಗಗನಯಾನ ಮಿಷನ್ನ ಭಾಗವಾಗಿ 8,000ಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಅಗತ್ಯ ತಯಾರಿ ನಡೆಯುತ್ತಿದೆ. ಗಗನನೌಕೆಗೆ ಬೇಕಾದ ಎಲ್ಲಾ ಹಾರ್ಡ್ವೇರ್ ಭಾಗಗಳು ಸತೀಶ್ ಧವನ್ ಸ್ಪೇಸ್ ಸೆಂಟರ್ನಲ್ಲಿ ತಲುಪಿವೆ. ಅವುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ.
ಮೊದಲ ಮಾನವರಹಿತ ಗಗನಯಾನ್ ಮಿಷನ್ ಡಿಸೆಂಬರ್ನಲ್ಲಿ ಶುರುವಾಗಬೇಕಿತ್ತು. ಇದರ ಬದಲು ಜನವರಿಯಲ್ಲಿ ಶುರುವಾಗಿ ಮಾರ್ಚ್ ಅಥವಾ ಏಪ್ರಿಲ್ವರೆಗೂ ಮಿಷನ್ ಇರುತ್ತದೆ. ಅದಕ್ಕೆ ಜಿ1 ಮಿಷನ್ ಎಂದು ಹೆಸರಿಡಲಾಗಿದೆ. ಅದಾದ ಬಳಿಕ ಜಿ2 ಮತ್ತು ಜಿ3 ಮಿಷನ್ ನಡೆಯುತ್ತವೆ.
For More Updates Join our WhatsApp Group :
