ಬೆಂಗಳೂರು: ಭಾರತ-ಪಾಕಿಸ್ತಾನಗಳ ನಡುವೆ ಉಂಟಾಗಿರುವ ಸಂಘರ್ಷ ಸನ್ನಿವೇಶದಲ್ಲಿ ಸೈಬರ್ ವಂಚಕರ ಕುರಿತು ಎಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.

ಉಭಯ ದೇಶಗಳ ನಡುವಿನ ಪರಿಸ್ಥಿತಿಯ ಕುರಿತು ಜನಸಾಮಾನ್ಯರ ಕುತೂಹಲವನ್ನು ಬಳಸಿಕೊಳ್ಳುವ ಸೈಬರ್ ವಂಚಕರು ಸುಳ್ಳು ಸುದ್ದಿ, ಫಿಶಿಂಗ್, ನಕಲಿ ಲಿಂಕ್ಗಳ ಮೂಲಕ ವಂಚಿಸುವ ಸಾಧ್ಯತೆಗಳಿವೆ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಇಂಡೋ-ಪಾಕ್ ಸಂಘರ್ಷ ಸನ್ನಿವೇಶದ ಕುರಿತ ಎಕ್ಸ್ಕ್ಲ್ಯೂಸಿವ್ ದೃಶ್ಯಗಳು, ವೈರಲ್ ವಿಡಿಯೋ, ಆಫರ್ ಕುರಿತ ಸಂದೇಶಗಳು ನಕಲಿ ವೆಬ್ಸೈಟ್ಗಳ ಮೂಲಕ ಸೃಷ್ಟಿಯಾಗಿರಬಹುದು. ಹಾಗೂ ನಿಮ್ಮ ಫೋನ್ಗಳಿಗೆ ಮಾಲ್ವೇರ್ಗಳನ್ನು ಇನ್ಸ್ಟಾಲ್ ಮಾಡಬಹುದು. ನಕಲಿ ಲಿಂಕ್ಗಳ ಮೂಲಕ ಸೇನೆಯಲ್ಲಿ ಕೆಲಸದ ಅಪ್ಲಿಕೇಶನ್ ಹೆಸರಿನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸೈಬರ್ ವಂಚಕರು ಕಳುವು ಮಾಡಬಹುದು. ತುರ್ತಾಗಿ ಆರ್ಮಿ ನೇಮಕಾತಿ ಮತ್ತಿತರ ಕುರಿತು ಅಪರಿಚಿತರಿಂದ ಮೇಲ್ಗಳನ್ನು ಸ್ವೀಕರಿಸಿದರೆ ಅವುಗಳನ್ನು ತೆರೆಯದಿರಿ. ಅವುಗಳ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಸಾಧ್ಯತೆಗಳಿವೆ.
ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆಗಳೇನು..?: ವಾಟ್ಸ್ಆ್ಯಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುವ ಅಪರಿಚಿತರ ಸಂದೇಶಗಳನ್ನು ತೆರೆಯದಿರಿ. ನಿಮ್ಮ ಪರಿಚಿತರಿಂದಲೇ ಅನುಮಾನಾಸ್ಪದ ಫೈಲ್ಗಳನ್ನು ಸ್ವೀಕರಿಸಿದರೂ ಸಹ ತೆರೆಯದಿರಿ ಹಾಗೂ ಇತರರೊಂದಿಗೆ ಹಂಚಿಕೊಳ್ಳದಿರಿ, ಬದಲಿಗೆ ಅವುಗಳನ್ನು ಡಿಲೀಟ್ ಮಾಡುವುದು ಸೂಕ್ತ.
• ಎಪಿಕೆ ಫೈಲ್ಗಳನ್ನು ತೆರೆಯದಿರಿ, ಆ್ಯಪ್ಗಳನ್ನು ಡೌನ್ಲೋಡ್ ಮಾಡಲು ಅಧಿಕೃತವಾದ ಪ್ಲೇ-ಸ್ಟೋರ್ನ್ನು ಬಳಸಿ. ಸೂಕ್ಷ್ಮ ಹಾಗೂ ಎಕ್ಸ್ಕ್ಲ್ಯೂಸೀವ್ ಸುದ್ದಿ, ವಿಡಿಯೋಗಳನ್ನೊಳಗೊಂಡಿದೆ ಎನ್ನಲಾದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
• ಅಪರಿಚಿತ, ಅನುಮಾನಾಸ್ಪದ ಸಂದೇಶಗಳ ಬಗ್ಗೆ ಯಾವಾಗಲೂ ಎಚ್ಚರದಿಂದಿರಿ. ಅಂಥಹ ವಾಟ್ಸ್ಆ್ಯಪ್ ಗ್ರೂಪ್ಗಳ ಕುರಿತು ಎಕ್ಸಿಟ್, ರಿಪೋರ್ಟ್ ಮತ್ತು ಡಿಲಿಟ್ ಸೂತ್ರ ಅನುಸರಿಸಿ.
• ವೆರಿಫೈಡ್ ಅಲ್ಲದ ವಿಚಾರಗಳನ್ನು ರಿಪೋರ್ಟ್ ಮಾಡಿ.
• ವಾಟ್ಸ್ಆ್ಯಪ್ ಸೆಕ್ಯೂರಿಟಿ ಸೆಟ್ಟಿಂಗ್ಸ್ ಬಳಸಿ, ಮೀಡಿಯಾ (ಫೋಟೋ, ವಿಡಿಯೋ, ಆಡಿಯೋ ಹಾಗೂ ಡಾಕ್ಯುಮೆಂಟ್) ಆಟೋ ಡೌನ್ಲೋಡ್ ಆಫ್ ಮಾಡಿ.
• ವಾಟ್ಸ್ಆ್ಯಪ್ ಸೇರಿದಂತೆ ನಿಮ್ಮ ಎಲ್ಲಾ ಖಾತೆಗಳಿಗೆ 2 ಫ್ಯಾಕ್ಟರ್ ಅಥೆಂಟಿಕೇಶನ್ ಸೆಟ್ಟಿಂಗ್ಸ್ ಚಾಲ್ತಿಯಲ್ಲಿರಿಸುವ ಮೂಲಕ ಹೆಚ್ಚುವರಿ ಸೆಕ್ಯೂರಿಟಿ ಖಚಿತಪಡಿಸಿಕೊಳ್ಳಿ.
• ಅಪರಿಚಿತರ ಮೂಲಕ ಸ್ವೀಕರಿಸುವ ಮೇಲ್ಗಳನ್ನು ತೆರೆಯದಿರಿ, ಮುಖ್ಯವಾಗಿ ತುರ್ತು ವಿಚಾರ, ಇಂಡೋ-ಪಾಕ್ ಯುದ್ಧ ಸನ್ನಿವೇಶದ ಕುರಿತು ಎಂಬ ತಲೆಬರಹವಿರುವ ಮೇಲ್ಗಳನ್ನು ತೆರೆಯಲೇಬೇಡಿ.
• ಅನುಮಾನಾಸ್ಪದ ಲಿಂಕ್ಗಳ ಕುರಿತು ಎಚ್ಚರವಿರಲಿ, ವಂಚಕರು ಅಧಿಕೃತ ಸಂಸ್ಥೆಗಳ ಹೆಸರಿನಲ್ಲಿ ಮೇಲ್ ಸಂದೇಶಗಳನ್ನು ರವಾನಿಸಬಹುದು.
• ಅಪ್ಡೇಟೆಡ್ ಆ್ಯಂಟಿ-ವೈರಸ್ ಸಾಫ್ಟ್ವೇರ್, ಸ್ಪ್ಯಾಮ್ ಫಿಲ್ಟರ್ಗಳನ್ನು ಬಳಸಿ.
• ನಿಮ್ಮ ಅತಿಮುಖ್ಯ ಡೇಟಾಗಳನ್ನು ಕ್ಲೌಡ್ ಅಥವಾ ಹೆಚ್ಚುವರಿ ಸ್ಟೋರೇಜ್ನಲ್ಲಿ ಬ್ಯಾಕ್ಅಪ್ ಇರಿಸುವುದು ಸೂಕ್ತ.
• ಸಾಫ್ಟ್ವೇರ್ ಅಪ್ಡೇಟ್ ಮೂಲಕ ನಿಮ್ಮ ಮಾಹಿತಿಗಳನ್ನು ಸುರಕ್ಷಿತವಾಗಿರಿಸಿ.
• ವೆರಿಫೈಡ್ ಅಲ್ಲದ ಸುದ್ದಿ, ವಿಚಾರಗಳನ್ನು ಹಂಚಿಕೊಳ್ಳದಿರಿ, ಅಧಿಕೃತ ಸಾಮಾಜಿಕ ಜಾಲತಾಣ ಖಾತೆ, ವೆಬ್ಸೈಟ್ಗಳ ಮೂಲಕ ಖಚಿತಪಡಿಸಿಕೊಳ್ಳಿ.
• ಈ ರೀತಿಯ ಸೈಬರ್ ದಾಳಿಗೊಳಗಾದರೆ ಆತಂಕಪಡಬೇಡಿ, ಸೈಬರ್ ಕ್ರೈಂ ಸಹಾಯವಾಣಿ (1930) ಯನ್ನು ಸಂಪರ್ಕಿಸಿ, ಅಥವಾ cybercrime.gov.in ನಲ್ಲಿ ರಿಪೋರ್ಟ್ ಮಾಡಿ.
“ನಿಮ್ಮ ಎಚ್ಚರಿಕೆಯಿಂದ ಭಾರತವನ್ನು ಸುರಕ್ಷಿತವಾಗಿರಿಸಲು ಸಹಾಯವಾಗಲಿದೆ. ಸಾರ್ವಜನಿಕರು ಸುರಕ್ಷಿತವಾಗಿ ಎಚ್ಚರವಾಗಿರುವ ಮೂಲಕ ಈ ಕಠಿಣ ಸಂದರ್ಭದಲ್ಲಿ ಸೈಬರ್ ವಂಚಕರನ್ನು ನಾವು ಒಟ್ಟಾಗಿ ಎದುರಿಸಬಹುದು” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಂದೇಶ ನೀಡಿದ್ದಾರೆ.