ಬೆಂಗಳೂರು : ಯಾವುದೇ ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಟ್ಟಡ ಕಾರ್ಮಿಕರಿಂದ ಹಿಡಿದು ಎಂಜಿನಿಯರಿಂಗ್ ವರೆಗೆ ಎಲ್ಲರಿಗೂ ಕೌಶಲ್ಯ ಅಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮೈಸೂರು ಹಾಗೂ ಧಾರವಾಡದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ಬಗ್ಗೆ ತರಬೇತಿಯನ್ನು ನೀಡುವ ಸಲುವಾಗಿ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಕೌಶಲ್ಯ ದೊರೆತರೆ ಅವರು, ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡುವುದಲ್ಲದೆ ಗುಣಮಟ್ಟದಲ್ಲಿ ಮಾಡಬಲ್ಲರು. ಕೌಶಲಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಬೇರೆ ಕೌಶಲಗಳ ಅಗತ್ಯ ಮತ್ತು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಉನ್ನತೀಕರಿಸಿದ ಕೌಶಲ್ಯದ ಪ್ರಾಮುಖ್ಯತೆ ಮನಗಂಡು ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಪ್ರಯತ್ನಕ್ಕೆ ಉದ್ಯಮಿಗಳು, ಕೈಗಾರಿಕೆಗಳ ಮುಖ್ಯಸ್ಥರು ಆಸಕ್ತಿ ತೋರಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಕಟ್ಟಡ ಕಾರ್ಮಿಕರಿಗೆ ತರಬೇತಿ ಪಡೆದ ಕೌಶಲ್ಯ ಇದ್ದರೆ ಅವರು ನಿರುದ್ಯೋಗಿಗಳಾಗುವ ಪ್ರಮೆಯವೇ ಬರುವುದಿಲ್ಲ. ಒಳ್ಳೆಯ ಪ್ರಮಾಣಪತ್ರ ಇದ್ದರೆ ವಿದೇಶಗಳಲ್ಲೂ ಉದ್ಯೋಗ ಪಡೆಯಬಹುದು. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರೇ ಆಗದೇ ಒಳ್ಳೆಯ ಕೌಶಲ ಪಡೆದು ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದರು.

