ಬೆಂಗಳೂರು: ಬೆಂಗಳೂರಿನಲ್ಲಿಂದು ಮೊದಲ ಬಾರಿಗೆ ಕಲಾ ಯಾತ್ರೆಯನ್ನು ಆಯೋಜಿಸಲಾಗಿದೆ. ಬುಡಕಟ್ಟು ಮತ್ತು ಜಾನಪದ ಕಲೆಗಳನ್ನು ಉಳಿಸುವಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಪರಿಹರಿಸಲು ಕಲಾ ಯಾತ್ರೆಯನ್ನು ನಡೆಸಲಾಗುತ್ತಿದೆ. ಇನ್ಫೋಸಿಸ್ ಫೌಂಡೇಶನ್ ಮತ್ತು ಭಾರತೀಯ ವಿದ್ಯಾಭವನ ಒಟ್ಟಾಗಿ ಸೇರಿ ಈ ಯಾತ್ರೆಯನ್ನು ನಡೆಸಲು ನಿರ್ಧರಿಸಿವೆ.
ಸುಮಾರು 25 ವರ್ಷಗಳಿಂದ ಭಾರತೀಯ ವಿದ್ಯಾ ಭವನದಲ್ಲಿ ಸಣ್ಣ ಮಟ್ಟದಲ್ಲಿ ಇದನ್ನು ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ನಾವು ಇದನ್ನು ದೊಡ್ಡ ಉತ್ಸವವನ್ನಾಗಿ ಮಾಡಲು ನಿರ್ಧರಿಸಿದ್ದೇವೆ. ಇದೇ ರೀತಿ ಪ್ರತೀ ವರ್ಷ ಕೂಡ ಆಯೋಜನೆ ಮಾಡುತ್ತೇವೆ ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್ ಎನ್ ಸುರೇಶ್ ಹೇಳಿದರು.
ಉತ್ಸವಕ್ಕೂ ಮುನ್ನ ಇತಿಹಾಸಕಾರರು ಮತ್ತು ಕಲಾವಿದರು ಒಂದೆಡೆ ಸೇರಿ ಜಾನಪದ ಮತ್ತು ಬುಡಕಟ್ಟು ಜನಾಂಗದ ಕಲಾ ಪ್ರಕಾರಗಳನ್ನು ಉಳಿಸಿಕೊಂಡು ಹೋಗುವ ಕುರಿತು ಚರ್ಚಿಸಿದರು. ಇದಕ್ಕೆ ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಶೋಧನಾ ಕೇಂದ್ರ ಸಹಕರಿಸಿದವು. ಇಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹೆಚ್ ಸಿ ಬೋರಲಿಂಗಯ್ಯ ಉತ್ಸವವನ್ನು ಉದ್ಘಾಟಿಸಿದರು. ಇಂದು ಬೆಳಗಿನ ಕಾರ್ಯಕ್ರಮದಲ್ಲಿ ಕಲಾ ಇತಿಹಾಸ ತಜ್ಞ ಚೂಡಾಮಣಿ ನಂದಗೋಪಾಲ್, ಧತ್ತು ಪುಟ್ಟಲಿಕಾ ತಿಯೇಟರ್ ನಿರ್ದೇಶಕಿ ಅನುಪಮಾ ಹೊಸಕೆರೆ, ಕರ್ನಾಟಕ ಚಿತ್ರಕಲಾ ಪರಿಷತ್ ಮ್ಯೂಸಿಯಂನ ಕ್ಯುರೇಟರ್ ವಿಜಯಶ್ರೀ ಸಿ.ಎಸ್., ದ್ರಾವಿಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಂ.ಎನ್.ವೆಂಕಟೇಶ್, ಲಲಿತಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಗೋಮತಿಗೌಡ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವಿಂದ್ರ ಸಿರಿವಾರ ಭಾಗವಹಿಸಿದ್ದರು.
ಬೆಳಗಿನ ಕಲಾಪ್ರಬಂಧದ ನಂತರ ಮಧ್ಯಾಹ್ನ ವಿಶೇಷ ಚರ್ಚೆ ನಡೆಯಲಿದ್ದು, ಕಲೆಗಳ ಭವಿಷ್ಯದ ಬಗ್ಗೆ ಇತಿಹಾಸಕಾರರು, ಕಲಾವಿದರು ಮತ್ತು ಶ್ರೋತರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಜಾನಪದ ಮತ್ತು ಬುಡಕಟ್ಟು ಕಲೆ ಹಾಗೂ ಜಾನಪದವು ನಮ್ಮ ನಾಡಿನ ಸಾಂಸ್ಕೃತಿಕ ಗುರುತಿನ ಅವಿಭಾಜ್ಯ ಭಾಗವಾಗಿದೆ. ಅವುಗಳ ಉಳಿವಿಗಾಗಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮುಖ್ಯವಾಗಿದೆ. ಇದು ಉತ್ಸವದ ಹಿಂದಿನ ಮೂಲ ಕಲ್ಪನೆ ಎಂದು ಸುರೇಶ್ ಹೇಳಿದರು.