ಕಾರವಾರ || ಕಾರವಾರ ಸಿಬರ್ಡ್ ನಿರಾಶ್ರಿತರಿಗೆ ಸಿಹಿ ಸುದ್ದಿ: 10 ಕೋಟಿ ಪರಿಹಾರ ಮಂಜೂರು

ಕಾರವಾರ || ಕಾರವಾರ ಸಿಬರ್ಡ್ ನಿರಾಶ್ರಿತರಿಗೆ ಸಿಹಿ ಸುದ್ದಿ: 10 ಕೋಟಿ ಪರಿಹಾರ ಮಂಜೂರು

ಕಾರವಾರ: ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬದ ಸಮಯದಲ್ಲೇ ಕಾರವಾರದ ಸಿಬರ್ಡ್ ನಿರಾಶ್ರಿತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಇಷ್ಟು ವರ್ಷಗಳು ಸಿಬರ್ಡ್ ನಿರಾಶ್ರಿತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಪರಿಹಾರ ಹಣ ಮಂಜೂರಾಗಿದೆ. 28/A ಪ್ರಕರಣದಲ್ಲಿ 2008-09 ರಿಂದ ಬಾಕಿ ಉಳಿದಿದ್ದ ಕಾರವಾರದ ಸಿಬರ್ಡ್ ಭೂ ನಿರಾಶ್ರಿತರ 10.47 ಕೋಟಿ ರೂಪಾಯಿಗಳ ಪರಿಹಾರ ಮಂಜೂರಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಬರ್ಡ್ ಯೋಜನೆ ಅಡಿಯಲ್ಲಿ ಸೇನಾ ನೆಲೆ ನಿರ್ಮಾಣಕ್ಕಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರಕ್ಕೆ ಸೂಕ್ತ ಪರಿಹಾರ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು ಇದರಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದವು.

ಈ ಪ್ರಕರಣಗಳು ಅನೇಕ ವರ್ಷಗಳಿಂದ ಬಾಕಿ ಉಳಿದಿದ್ದು ಅದನ್ನು ಸಂಸದನಾಗಿ ಆಯ್ಕೆಯಾದ ಮೇಲೆ ಈ ಕುರಿತು ತಕ್ಷಣ ನೌಕಾ ನೆಲೆ ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮತ್ತು ಸ್ಥಳೀಯ ರೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಕೇಂದ್ರ ರಕ್ಷಣಾ ಮಂತ್ರಿಗಳ ಗಮನಕ್ಕೆ ತಂದು, ನಿರಂತರ ಪ್ರಯತ್ನದಿಂದ 57 ಪ್ರಕರಣಗಳಿಗೆ ಪರಿಹಾರ ದೊರಕಿದೆ ಎಂದಿದ್ದಾರೆ. ಕೆಲವು ನಿರಾಶ್ರಿತರ ಪ್ರಕರಣಗಳು ಅನೇಕ ವರ್ಷಗಳಿಂದ ಪರಿಹಾರಕ್ಕಾಗಿ ನಿರಂತರವಾಗಿ ಸರ್ಕಾರದ ಬಾಗಿಲು ತಟ್ಟುತ್ತಾ ಬಂದಿದ್ದರು. ಕೇಂದ್ರ ಸರ್ಕಾರದ ಈ ಆದೇಶದಿಂದ ಈಗ 10.47 ಕೋಟಿ ರೂಪಾಯಿಗಳ ಈ ಪರಿಹಾರ ನಿಧಿಯ ಮಂಜೂರಾತಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳು ದೀರ್ಘಕಾಲದ ನಿರೀಕ್ಷೆಯಿಂದ ಮುಕ್ತಿಗೊಳ್ಳಲಿದೆ.

ಕೆಲವೇ ದಿನಗಳಲ್ಲಿ ಈ 57 ಪ್ರಕರಣಗಳಿಗೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಲಿದೆ. ಉಳಿದ ಪ್ರಕರಣಗಳಲ್ಲಿ ಹಂತ ಹಂತವಾಗಿ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಆದೇಶಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು, ಕೇಂದ್ರ ರಕ್ಷಣಾ ಮಂತ್ರಿಗಳಾದ ರಾಜನಾಥ ಸಿಂಗ್ ಅವರನ್ನು, ಮತ್ತು ಜಿಲ್ಲಾಡಳಿತ, ಕೇಂದ್ರ ಹಾಗೂ ರಾಜ್ಯ ಸರಕಾರದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

Leave a Reply

Your email address will not be published. Required fields are marked *