ಕೊರಟಗೆರೆ: ರಾಜ್ಯಗಳ ಅಸ್ಮಿತೆ ನಾಡು, ನುಡಿ, ಜಲ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಗಳು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಮಾತ್ರ ಸಾಧ್ಯವಿದ್ದು, ಕರ್ನಾಟಕದ ಭದ್ರತೆಗೆ ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಅವರು ಜೂ.18ರಂದು ಹಿಂದೂ ಸಾದರ ಸಮುದಾಯ ಭವನದಲ್ಲಿ.

ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಗಮನ ನೀಡದೆ ಎಲ್ಲವೂ ದೆಹಲಿ ಸೂಚನೆಯಂತೆ ಆಡಳಿತ ನೀಡುತ್ತವೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಬಲಿಷ್ಠ ಕಾರ್ಯಕರ್ತರ ಪಡೆ ಇದೆ, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಆ ಪಡೆಯನ್ನು ಮತ್ತಷ್ಟು ಶಕ್ತಿಯುತವಾಗಿ ಕಟ್ಟಲಾಗುವುದು. ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರು ನಾಡಿಗಾಗಿ 93 ನೆ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ಅವರು ನೀಡಿದ ಮಹಿಳಾ ಮೀಸಲಾತಿಯಿಂದ ಇಂದು ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರು ಹಾಗೂ ಎಲ್ಲಾ ವರ್ಗದವರೂ ಸಾಮಾಜಿಕ ನ್ಯಾಯ ಪಡೆದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಎಲ್ಲಾ ಬೂತ್ಗಳಲ್ಲೂ ಸದಸ್ಯತ್ವ ನೋಂದಣಿ ಮಾಡಿ, ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಿ ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ದರಾಗಿ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಲು ಪ್ರಥಮವಾಗಿ 58 ದಿನಗಳಲ್ಲಿ 116 ಕ್ಷೇತ್ರಗಳ ಪ್ರವಾಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಹಗರಣ, ಭಷ್ಟಾಚಾರ, ಜನವಿರೋಧಿ ನೀತಿಗಳ ವಿರುದ್ದ ಕಾಲ್ನಡಿಗೆ ಬೃಹತ್ ಜಾಥಾ ಮಾಡಲಾಗುವುದು. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವು ಬಲಿಷ್ಠವಾಗಿದೆ, ಸಂಖ್ಯೆಗಳಲ್ಲಿ ಶಾಸಕರನ್ನು ಕಡಿಮೆ ಮಾಡಿಕೊಂಡಿದ್ದರೂ ಮತದಾನದಲ್ಲಿ ಶೇ. 34 ರಷ್ಟು ಪಡೆದು ಇತರ ಪಕ್ಷಗಳಿಗಿಂತ ಮುಂದಿದೆ. ಕೊರಟಗೆರೆ ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐ.ಪಿ.ಎಲ್. ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದಲ್ಲಿ ಬಲಿಯಾದ ಅಮಾಯಕರ ಬಗ್ಗೆ ಅವರು ತೋರಿದ ಅಸಹಾಯಕತೆ, ಅಸಮರ್ಥತೆ ರಾಜ್ಯದ ಜನ ನೋಡಿದ್ದಾರೆ. 2028ರ ವಿಧಾನ ಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಸುಧಾಕರಲಾಲ್ ಶೇ.100ಕ್ಕೆ 100 ಭಾಗ ಗೆದ್ದು ಶಾಸಕರಾಗುವುದು ಖಚಿತವಾಗಿದ್ದು, ಇದನ್ನು ತಪ್ಪಿಸಲು ಯಾರಿಂದಲು ಸಾಧ್ಯವಿಲ್ಲ ಎಂದರು.

ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಜೆಡಿಎಸ್ ಪಕ್ಷದ ಸಂಘಟನೆಗೆ ವರಿಷ್ಠರಾದ ದೇವೇಗೌಡರು ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ದುಡ್ಡಿಯುತ್ತಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರೈತರಿಗೆ, ಬಡವರಿಗೆ, ಮಹಿಳೆಯರಿಗೆ ನೀಡಿದ ಕಾರ್ಯಕ್ರಮವನ್ನು ಬೇರೆ ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಕೇಂದ್ರ ಸಚಿವರಾದ ಮೇಲೆ ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಒಂದು ಲಕ್ಷ ಕೋಟಿ ರೂ. ಗಳ ಮೌಲ್ಯದ ಸರ್ಕಾರದ ಸ್ಟೀಲ್ ಕಾರ್ಖಾನೆಯನ್ನು ಉಳಿಸಿ, 11 ಸಾವಿರ ಕಾರ್ಮಿಕರಿಗೆ ಕೆಲಸ ನೀಡಿ ಮತ್ತೆ ಜೀವನ ಕಟ್ಟಿಕೊಟ್ಟಿದ್ದಾರೆ. ಈಗ ರಾಜ್ಯದಲ್ಲಿ ಪಕ್ಷ ಕಟ್ಟಲು ನಿಖಿಲ್ ಕುಮಾರಸ್ವಾಮಿರವರು 58 ದಿನಗಳ ಕಾಲ 116 ಕ್ಷೇತ್ರಗಳಿಗೆ ಬಲ ತುಂಬಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.