ಕುಂದಾಪುರ || ಜಸ್ಟ್ ಪಾಸ್ ಮಾಡು ಸಾಕು- ದೇವರಿಗೆ ಪತ್ರ ಬರೆದ ವಿದ್ಯಾರ್ಥಿ

ಕುಂದಾಪುರ || ಜಸ್ಟ್ ಪಾಸ್ ಮಾಡು ಸಾಕು- ದೇವರಿಗೆ ಪತ್ರ ಬರೆದ ವಿದ್ಯಾರ್ಥಿ

ಕುಂದಾಪುರ: ಪಾಸಾಗುವಷ್ಟು ಮಾತ್ರ ಅಂಕ ಕೊಡು ದೇವರೇ ಎಂದು ವಿದ್ಯಾರ್ಥಿಯೊಬ್ಬ ದೇವರಿಗೆ ಪತ್ರ ಬರೆದಿದ್ದಾನೆ. ದೇವರ ಕಾಣಿಕೆ ಹುಂಡಿಯಲ್ಲಿ ವಿಚಿತ್ರ ಪತ್ರ ಸಿಕ್ಕಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ಚೀಟಿಯಲ್ಲಿ ಯಾವ ವಿಷಯಕ್ಕೆ ಎಷ್ಟು ಅಂಕ ಬರಬೇಕು ಅನ್ನೋದನ್ನು ಕೂಡ ವಿದ್ಯಾರ್ಥಿ ಬರೆದಿದ್ದಾನೆ.

ಹೌದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹೊಳಮಗ್ಗಿ ಹೊ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಸಿಕ್ಕಿದೆ. ಈ ಚೀಟಿಯಲ್ಲಿ ವಿದ್ಯಾರ್ಥಿ ತನ್ನನ್ನು ಜಸ್ಟ್ ಪಾಸ್ ಮಾಡಿದರೆ ಸಾಕು ದೇವರೆ ಎಂದು ಬೇಡಿಕೊಂಡು ಬರೆದ ಚೀಟಿಯನ್ನು ಹುಂಡಿಗೆ ಹಾಕಿದ್ದಾನೆ.

ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಈ ಚೀಟಿ ಸಿಕ್ಕಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿದ್ಯಾರ್ಥಿ ತನಗೆ ಎಷ್ಟು ಅಂಕ ಬೇಕು ಅನ್ನೋದನ್ನು ಕೂಡ ಚೀಟಿಯಲ್ಲಿ ಬರೆದಿದ್ದಾನೆ. ಗಣಿತದಲ್ಲಿ 39, 38, 37, 36 ಅಂಕ, ಇಂಗ್ಲೀಷ್ ವಿಷಯದಲ್ಲಿ 39,38,37 ಕನ್ನಡಕ್ಕೆ 40, 39 ವಿಜ್ಞಾನಕ್ಕೆ 39, 38 ಹಿಂದಿ ವಿಷಯಕ್ಕೆ 40, 39 ಹಾಗೂ ಸಮಾಜಶಾಸ್ತ್ರಕ್ಕೆ 38, 37 ಅಂಕ ನೀಡುವಂತೆ ವಿದ್ಯಾರ್ಥಿ ಚೀಟಿಯಲ್ಲಿ ಬರೆದು ಬೇಡಿಕೊಂಡಿದ್ದಾನೆ. ಜೊತೆಗೆ ಇದಕ್ಕಿಂತಲೂ ಹೆಚ್ಚು ಕಡಿಮೆ ಅಂಕ ನನಗೆ ಬೇಡ ಎಂದು ಕೂಡ ವಿದ್ಯಾರ್ಥಿ ಬರೆದಿದ್ದಾನೆ.

ದೇವರಿಗೆ ಆಯ್ಕೆ ಕೊಟ್ಟು ಕೋರಿಕೆ ಸಲ್ಲಿಸಿದ ವಿದ್ಯಾರ್ಥಿಯ ಚೀಟಿಯ ಈ ಫೋಟೋವನ್ನು Namma Kundapura ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋ ಹಂಚಿಕೊಂಡಾಗಿನಿಂದ 500 ಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್ಸ್ಗಳು ಬಂದಿವೆ.

ಈ ಪೋಸ್ಟ್ಗೆ ಸಾಕಷ್ಟು ಕಾಮೆಂಟ್ಗಳು ಬಂದಿದ್ದು, ‘ಈ ವಿದ್ಯಾರ್ಥಿಗೆ ಪೋಷಕರ ಭಯ ಹೆಚ್ಚಾಗಿರಬೇಕು. ಹೀಗಾಗಿ ಬಾಲಕ ಹೆದರಿಕೊಂಡಿದ್ದಾನೆ. ದೇವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ‘ದೇವರಿಗೆ ಬೇಡಿಕೊಳ್ಳುವುದರಲ್ಲಿ ತಪ್ಪೇನು ಇಲ್ಲ. ಅದು ಅವರ ಕೋರಿಕೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ʼಪಾಪ ಆ ವಿದ್ಯಾರ್ಥಿಯನ್ನು ಪಾಸು ಮಾಡಪ್ಪಾ ದೇವರೇʼ ಎಂಬ ಕಾಮೆಂಟ್ ಮಾಡಿದ್ದಾರೆ. ಇದೇ ಕಾಮೆಂಟ್ ಬಾಕ್ಸ್ನಲ್ಲಿ ವಿದ್ಯಾರ್ಥಿಗಿರುವ ಆಸೆ ದುರಾಸೆ ಬಗ್ಗೆ ಕೂಡ ಚರ್ಚೆ ಆಗಿದೆ. ನೆಟ್ಟಿಗರೊಬ್ಬರು ‘ವಿದ್ಯಾರ್ಥಿಗೆ ದುರಾಸೆ ಇಲ್ಲ. ಜಸ್ಟ್ ಪಾಸ್ ಮಾಡು ಎಂದು ಬರೆದಿದ್ದಾನೆ’ ಎಂದು ಬರೆಯಲಾಗಿದೆ. ಇದಲ್ಲದೆ ಪೋಸ್ಟ್ಗೆ ಕಾಮಿಡಿ ಕಾಮೆಂಟ್ಗಳು ಬಂದಿವೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಹೆಚ್ಚಾಗುತ್ತಿದೆ. ಮಕ್ಕಳಿಗೆ ಪರೀಕ್ಷೆ ಭಯ ಹೋಗಲಾಡಿಸಲು ಪೋಷಕರ ಪಾತ್ರ ತುಂಬಾ ದೊಡ್ಡದಾಗಿದೆ. ಪರೀಕ್ಷಾ ಆತಂಕ ಇರುವ ಮಕ್ಕಳನ್ನು ಗುರುತಿಸಿ ನೂರು ಅಂಕ ಪಡೆಯುವುದು ಮಾತ್ರ ಗೆಲುವಲ್ಲ ಎನ್ನುವುದನ್ನು ಮನವರಿಕೆ ಮಾಡುವುದು ಅತ್ಯಗತ್ಯ. ಅಣುಕು ಪರೀಕ್ಷೆಗಳನ್ನು ನಡೆಸಿ ಅವರಲ್ಲಿನ ಕಾರ್ಯಕ್ಷಮತೆಯನ್ನು ಗುರುತಿಸಿ ಧೈರ್ಯ ತುಂಬಬೇಕು. ದೀರ್ಘ ಉಸಿರಾಟದ ಕ್ರಮಗಳನ್ನು ಕಲಿಸಿಕೊಡಬೇಕು. ಫೇಲಾಗುವ ಆತಂಕವಿದ್ದರೆ ಪದ್ಯದ ಇಡೀ ಓದಿನ ಬದಲು ಆಯ್ದ ಭಾಗಗಳನ್ನು ಸರಿಯಾಗಿ ಓದಲು ತಿಳಿಸಬೇಕು. ಹೀಗೆ ಕೆಲ ಕ್ರಮಗಳ ಮೂಲಕ ಪೋಷಕರು ಮಕ್ಕಳಿಗಿರುವ ಪರೀಕ್ಷೆಯ ಭಯವನ್ನು ಕಡಿಮೆ ಮಾಡುವಲ್ಲಿ ಪಾಲ್ಗೊಳ್ಳುವುದು ಉತ್ತಮ.

Leave a Reply

Your email address will not be published. Required fields are marked *