ಹಣ ಮಾಡುವುದೇ ವಕೀಲರ ವೃತ್ತಿಯ ಉದ್ದೇಶವಾಗಬಾರದು: CM

ಹಣ ಮಾಡುವುದೇ ವಕೀಲರ ವೃತ್ತಿಯ ಉದ್ದೇಶವಾಗಬಾರದು: CM

ಬೆಂಗಳೂರು: ನ್ಯಾಯ ಪಡೆಯುವುದು ಪ್ರಸ್ತುತದಲ್ಲಿ ಅತ್ಯಂತ ದುಬಾರಿಯಾಗಿದ್ದು, ಅನೇಕರಿಗೆ ಹಣವಿಲ್ಲದೆ ಅದು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಅನ್ಯಾಯವಾಗುತ್ತಿದ್ದು, ವಕೀಲರು ಹಣ ಮಾಡುವುದನ್ನೇ ತಮ್ಮ ವೃತ್ತಿಯ ಉದ್ದೇಶವನ್ನಾಗಿ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಮಂಗಳವಾರ ನಗರದಲ್ಲಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ದಿನಾಚರಣೆ ಉದ್ಘಾಟಿಸಿ ಹಾಗೂ ವಕೀಲರ ವೇದಿಕೆಯ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತ್ವರಿತವಾಗಿ ನ್ಯಾಯ ಸಿಗುವ ರೀತಿ ಮಾಡಬೇಕು. ನ್ಯಾಯ ವಿಳಂಬವಾದರೆ, ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತನ್ನು ನೆನಪಿಡಬೇಕು. ಇದು ವಕೀಲರ ದಿನನಿತ್ಯದ ಮಂತ್ರವಾಗಬೇಕು. ವಕೀಲರು ಮನಸ್ಸು ಮಾಡಿದರೆ ನ್ಯಾಯ ವಿಳಂಬವಾಗುವುದನ್ನು ತಪ್ಪಿಸಬಹುದು ಎಂದರು.

ಸತ್ಯ, ಸತ್ವ, ಸಾಕ್ಷ್ಯಾಧಾರಗಳಿಲ್ಲದ ಪ್ರಕರಣಗಳನ್ನು ವರ್ಷಾನುಗಟ್ಟಲೆ ಎಳೆಯಬಾರದು. ಅಶಕ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಕಕ್ಷಿದಾರರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಶುಲ್ಕ ಪಡೆಯಬೇಕು. ನ್ಯಾಯ ಕೊಡಿಸುವ ಕೆಲಸವನ್ನು ಮಾಡಲೇಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು

ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸಮಾಜದ ಸಮಸ್ಯೆಗಳು ಬಗೆಹರಿಸಲು ಸಾಧ್ಯವಾಗಲಿದೆ. ಸಮಾಜದ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಬಲ್ಲ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು

ಕಕ್ಷಿದಾರರ ಹಕ್ಕು ರಕ್ಷಿಸಬೇಕು: ಸರ್ಕಾರಿ ವಕೀಲರು ಹೆಚ್ಚು ಮಾತನಾಡುವುದಿಲ್ಲ ಎಂಬ ಆರೋಪವಿದೆ. ಪ್ರಕರಣವನ್ನು ಚೆನ್ನಾಗಿ ಓದಿ, ಸರಿಯಾದ ರೀತಿಯಲ್ಲಿ ನ್ಯಾಯಾಧೀಶರ ಮುಂದೆ ವಿಷಯ ಮಂಡಿಸಬೇಕು ಹಾಗು ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು ಎಂದರು.

ವಕೀಲ ಸಂಘದವರು ಸಲ್ಲಿಸಿರುವ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ನಿಧಿಗೆ ಅನುದಾನವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯ ಪೀಠದ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *