ಮಂಡ್ಯ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೇರಾ ಸುರಕ್ಷಾ ವಿಮಾ ಯೋಜನೆಯು ತೆಂಗಿನ ಮರಗಳನ್ನು ಏರುವ ಕೆಲಸ ನಂಬಿರುವವರಿಗೆ ಸದ್ಯ ವರದಾನವಾಗಿದೆ. ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ), ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಿಂದ ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಈ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ. ಇದರಿಂದ ದೇಶದಲ್ಲಿ ತೆಂಗು ಬೆಳೆಗೆ ಪ್ರೋತ್ಸಾಹ ನೀಡಿದಂತಾಗುತ್ತಿದೆ.
ಈ ವಿಮಾ ಯೋಜನೆಯಲ್ಲಿ ತೆಂಗಿನ ಮರಗಳನ್ನು ಏರಿ ಎಳನೀರು, ಕಾಯಿ ಕೀಳುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗಿನಕಾಯಿ ಕೊಯ್ದು ಮಾಡುವವರಿಗೆ, ಹೈಬ್ರಿಡೋನೇಶನ್ (ಸಂಕರೀಕರಣ) ಕೆಲಸಗಾರರಿಗೆ, ಡಿಎಸ್ ಪಿ (ಪ್ರಾತ್ಯಕ್ಷಿತೆ ಹಾಗೂ ಬೀಜ ಉತ್ಪಾದನೆ) ಫಾರ್ಮ್ ಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಾಗೂ ಎಫ್ಸಿಟಿ (ಫ್ರೆಂಡ್ಸ್ ಆಫ್ ಕೋಕೋನಟ್ ಟೀ) ಕೌಶಲ್ಯ-ತರಭೇತಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ. ಹೀಗಾಗಿ ಈ ಯೋಜನೆಯ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕಾಗಿದ್ದು, ಈ ಬಗ್ಗೆ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಈ ಯೋಜನೆಯಡಿ ವಿಮೆಯ ಮೊತ್ತವು ವಾರ್ಷಿಕ ರೂ 956/- ಆಗಿದ್ದು, ಶೇ.75:25ರಂತೆ ಇದರಲ್ಲಿ ರೂ.717/- ಕಂತಿನ ಮೊತ್ತವನ್ನು ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಪಾವತಿ ಮಾಡಲಾಗುವುದು ಹಾಗೂ ಉಳಿದ ರೂ 239/- ಕಂತಿನ ಮೊತ್ತವನ್ನು ಪಾಲಿಸಿದಾರರು ಪಾವತಿಸಬೇಕಾಗಿರುತ್ತದೆ. ಪ್ರತಿ ವರ್ಷವು ಈ ವಿಮಾ ಯೋಜನೆಯನ್ನು ಪಾಲಿಸಿದಾರರು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯಡಿ ಪಾಲಿಸಿದಾರರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ 7 ಲಕ್ಷ ರೂಪಾಯಿ, ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ 3.50 ಲಕ್ಷ ರೂಪಾಯಿ, ಆಸ್ಪತ್ರೆ ವೆಚ್ಚ (24ಗಂಟೆ ಐಪಿ) ಗರಿಷ್ಠ 2 ಲಕ್ಷ ರೂಪಾಯಿ, ತಾತ್ಕಲಿಕ ಅಂಗವಿಕಲತೆ ಹೊಂದುವವರಿಗೆ ಪ್ರತಿ ವಾರ ರೂ.3500/-ರಂತೆ ಗರಿಷ್ಠ ರೂ 21,000/-, ಆಂಬ್ಯುಲೆನ್ಸ್ ಖರ್ಚು 3500 ರೂಪಾಯಿ ಹಾಗೂ ಪಾಲಿಸಿದಾರರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5500 ರೂಪಾಯಿ ನೀಡಲಾಗುತ್ತದೆ.
ತೆಂಗು ಅಭಿವೃದ್ಧಿ ಮಂಡಳಿಯಿಂದ ನಿಗದಿತ ಅರ್ಜಿ ನಮೂನೆಗೆ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯ ಕುರಿತು ಜಾಲತಾಣದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಮಂಡ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್ ರೂಪಶ್ರೀ ತಿಳಿಸಿದ್ದಾರೆ.