ಮಂಡ್ಯ: ಶ್ರೀರಂಗಪಟ್ಟಣ ಠಾಣಾ ವ್ಯಾಪ್ತಿಯ ನಾರ್ಥ್ ಬ್ಯಾಂಕ್ ಬಳಿಯ ವಿಸಿ ಕಾಲುವೆಯಲ್ಲಿ ಮುಳುಗಿದ್ದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.

ಕಾಲುವೆಯ ನೀರು ಕಡಿಮೆ ಮಾಡಿರುವ ಹಿನ್ನೆಲೆ ಕಾಲುವೆಯಲ್ಲಿ ಸ್ಯಾಂಟ್ರೋ ಕಾರೊಂದು ಮುಳುಗಿರುವುದು ಪತ್ತೆಯಾಗಿದೆ. ಬಳಿಕ ಕಾರನ್ನು ನೀರಿನಿಂದ ಹೊರಗೆಳೆದ ಬಳಿಕ ಕಾರಿನ ಒಳಗೆ 3 ಮೃತದೇಹಗಳು ಕಂಡು ಬಂದಿವೆ. ಮೃತರು ಕೆ.ಆರ್.ನಗರ ತಾಲೂಕಿನವರಾಗಿದ್ದು, ಅಲ್ಲಿನ ಠಾಣೆಯಲ್ಲಿ ಮಿಸ್ಸಿಂಗ್ ಕೇಸು ದಾಖಲಾಗಿರುವುದಾಗಿ ತಿಳಿದುಬಂದಿದೆ.
ಕಾರಿನಲ್ಲಿ ಕುಮಾರಸ್ವಾಮಿ(38), 3 ಹಾಗೂ 8 ವರ್ಷದ ಮಕ್ಕಳ ಮೃತದೇಶಗಳು ಪತ್ತೆಯಾಗಿವೆ. ಇವರು ಏ.16 ರಂದು ಬೆಂಗಳೂರಿನಿಂದ ಕಾರಿನಲ್ಲಿ ಕೆ. .ಆರ್.ನಗರಕ್ಕೆ ಬರುವಾಗ ಕಾಣೆಯಾಗಿದ್ದರು. ಬಳಿಕ ಏ.19 ರಂದು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಇವರು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಅವರು ಚಲಿಸುತ್ತಿದ್ದ ಕಾರು ಕಾಲುವೆಯಲ್ಲಿ ಮುಳುಗಿರುವುದು ಬೆಳಕಿಗೆ ಬಂದಿದೆ. ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಕೆ.ಆರ್.ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.