ಮಂಗಳೂರು(ದಕ್ಷಿಣ ಕನ್ನಡ): ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ, ಫಾಝಿಲ್ ಹತ್ಯೆ ಆರೋಪಿ ಸುಹಾಸ್ ಶೆಟ್ಟಿ ಪಾರ್ಥಿವ ಶರೀರವು ಮೆರವಣಿಗೆ ಮೂಲಕ ಬಂಟ್ವಾಳ ತಾಲೂಕಿನ ಕಾರಿಂಜಕ್ಕೆ ತೆರಳಿತು.

ಬೆಳಗ್ಗೆಯೇ ಬಿಜೆಪಿ ಶಾಸಕರು, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ, ಬಜರಂಗದಳದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಆಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿದ್ದರು. ಆಸ್ಪತ್ರೆಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 9.30ರ ಸುಮಾರಿಗೆ ಮೃತದೇಹದ ಪಾರ್ಥಿವ ಶರೀರ ಕಾರಿಂಜದತ್ತ ಮೆರವಣಿಗೆಯಲ್ಲಿ ಸಾಗಿದೆ.
ಮಂಗಳೂರಿನಿಂದ ಸುಮಾರು 35ಕಿ.ಮೀ. ದೂರವಿರುವ ಕಾರಿಂಜಕ್ಕೆ ಪಾರ್ಥಿವ ಶರೀರವು ತೆರೆದ ವಾಹನದಲ್ಲಿ ಸಾಗಲಿದೆ. ದಾರಿ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇರಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಮುನ್ನೆಚ್ಚರಿಕೆ ವಹಿಸಲಾಗಿದೆ.

ನಗರದ ಹೊರವಲಯದ ಬಜಪೆಯ ಕಿನ್ನಿಪದವಿನಲ್ಲಿ ಸುಹಾಸ್ ಶೆಟ್ಟಿ ಮೇಲೆ ಗುರುವಾರ ರಾತ್ರಿ 8.30ರ ಸುಮಾರಿಗೆ ನಡುರಸ್ತೆಯಲ್ಲಿ ತಂಡವೊಂದು ತಲವಾರು ದಾಳಿ ನಡೆಸಿತ್ತು. ತಕ್ಷಣ ಎ.ಜೆ.ಆಸ್ಪತ್ರೆಗೆ ಕರೆತರಲಾಯಿತಾದರೂ, ಸುಹಾಸ್ ಶೆಟ್ಟಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.