ಮಂಗಳೂರು || ರಾಜ್ಯ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ಬೆದರಿಕೆ ಹಾಕದಿರಿ: Vijayendra

ಮಂಗಳೂರು || ರಾಜ್ಯ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆ ಒತ್ತಡಕ್ಕೆ ಮಣಿದು ಬೆದರಿಕೆ ಹಾಕದಿರಿ: Vijayendra

ಮಂಗಳೂರು: ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕದಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಧ್ಯರಾತ್ರಿ ಮನೆಗೆ ಹೋಗಿ ಹಿಂದೂ ಕಾರ್ಯಕರ್ತರು, ಹಿಂದೂ ಸಂಘಟನೆಗಳನ್ನು ಬೆದರಿಸುವ ಷಡ್ಯಂತ್ರ ಮಾಡದಿರಿ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠರಿಗೆ ಹೇಳಿದ್ದೇವೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯದಲ್ಲಿ 800ಕ್ಕೂ ಹೆಚ್ಚು ಅತ್ಯಾಚಾರ ಕೇಸ್ ಆಗಿರುವುದನ್ನು ಪತ್ರಿಕೆಯೊಂದರಲ್ಲಿ ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಎಸ್ಪಿಯವರ ಭೇಟಿ ವೇಳೆ ಅದನ್ನೇ ನಾವು ಹೇಳಿದ್ದೇವೆ. ನಾವು ನಿಮ್ಮಿಂದ ಉಪಕಾರ ಬಯಸುತ್ತಿಲ್ಲ; ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಪೊಲೀಸರ ಪರಿಸ್ಥಿತಿ ಏನಾಗುತ್ತದೆ ಎಂಬುದು ಕಣ್ಮುಂದೆಯೇ ಇದೆ. ಮೊನ್ನೆ ಬೆಂಗಳೂರಿನಲ್ಲಿ ಆರ್.ಸಿ.ಬಿ. ವಿಜಯೋತ್ಸವ ಮಾಡಿದ್ದರು. ಆಡಳಿತ ಪಕ್ಷ, ರಾಜಕೀಯ ಮುಖ್ಯಸ್ಥರ ತಪ್ಪಿಗಾಗಿ ಅಧಿಕಾರಿಗಳ ತಲೆದಂಡವಾಗಿದೆ ಎಂದು ವಿಶ್ಲೇಷಿಸಿದರು.

ಬೆಂಗಳೂರು ಪೊಲೀಸ್ ಕಮೀಷನರ್ ಸೇರಿ ಹಿರಿಯ 5 ಐಪಿಎಸ್ ಅಧಿಕಾರಿಗಳ ತಲೆದಂಡವಾಗಿದೆ. ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡಿದರೆ ಈ ದೇಶದಲ್ಲಿ ಒಂದು ನ್ಯಾಯಾಲಯದ ವ್ಯವಸ್ಥೆ ಇದೆ. ನಮ್ಮದೂ ಒಂದು ರಾಷ್ಟ್ರೀಯ ಪಕ್ಷ ಇದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಗಿ ವಿವರಿಸಿದರು.

ಬೆಂಗಳೂರಿನ ಆರ್ಸಿಬಿ ವಿಜಯೋತ್ಸವದ ವೇಳೆ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಅಲ್ಪಸಂಖ್ಯಾತರಿಗೆ ಖುಷಿ ಪಡಿಸಲು ಹೋಗಿ ಹಿಂದೂಗಳ ಮೇಲೆ ಒತ್ತಡ ತಂತ್ರ ಮಾಡುತ್ತಿದ್ದಾರೆ. ಅಪಮಾನ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಎಲ್ಲ ಕೊಲೆ ಕೇಸ್ಗಳಿಗೂ ಹಿಂದೂ, ಮುಸ್ಲಿಂ ಎಂದು ಬಣ್ಣ ಕೊಡಲಾಗುತ್ತಿದೆ. ಹೀಗೇ ಮುಂದುವರೆದರೆ, ರಾಜ್ಯದ ಕಾನೂನು- ಸುವ್ಯವಸ್ಥೆ ಪರಿಸ್ಥಿತಿ ಕುಸಿದು ಬೀಳುವ ಪರಿಸ್ಥಿತಿ ನಿರ್ಮಾಣವಾದೀತು ಎಂದು ಎಚ್ಚರಿಸಿದರು. ಇದಕ್ಕೆ ಸರಕಾರವೇ ಹೊಣೆ ಎಂದು ತಿಳಿಸಿದ್ದೇವೆ ಎಂದರು.

ಕಾಂಗ್ರೆಸ್ಸಿನವರ ವಿರುದ್ಧ ಕ್ರಮ ಯಾಕಿಲ್ಲ?

ಸಂಘದ ಹಿರಿಯರಾದ ಪ್ರಭಾಕರ ಭಟ್ ಅವರು ನಾಲ್ಕು ಗೋಡೆ ಮಧ್ಯೆ ಮಾತನಾಡಿದ್ದರ ವಿರುದ್ಧ ಕೇಸ್ ಮಾಡಿದ್ದಾರೆ. ಜಾಮೀನು ಪಡೆದರೂ ನೋಟಿಸ್ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಐವಾನ್ ಡಿಸೋಜ ಅವರು ಪ್ರಧಾನಿಯವರ ವಿರುದ್ಧ ಯಾವ ಭಾಷೆ ಪ್ರಯೋಗ ಮಾಡಿದ್ದಾರೆ? ಬಾಂಗ್ಲಾ ದೇಶದ ಪರಿಸ್ಥಿತಿ ಇಲ್ಲೂ ಆಗಬಹುದೆಂದು ಎಚ್ಚರಿಸಿದ್ದರು. ಪೊಲೀಸ್ ಇಲಾಖೆ, ರಾಜ್ಯ ಸರಕಾರ ಏನು ಮಾಡಿದೆ ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು. ಪೊಲೀಸ್ ಇಲಾಖೆ, ರಾಜ್ಯ ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಕರಾವಳಿ ಭಾಗದಲ್ಲಿ ವಾತಾವರಣ ಹಾಳಾಗಿದೆ. ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ತದನಂತರ ಆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು, ನಮ್ಮ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಪ್ರಮುಖರಾದ ಅರವಿಂದ ಬೆಲ್ಲದ, ಎನ್.ರವಿಕುಮಾರ್, ಪಕ್ಷದ ಹಿರಿಯ ಮುಖಂಡರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು, ಪಕ್ಷದ ಮುಖಂಡರ ಜೊತೆ ಇಲ್ಲಿ ಬಂದಿದ್ದೇವೆ. ಸಂಘ ಪರಿವಾರದ ಮುಖಂಡರು, ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಿದ್ದೇವೆ ಎಂದು ವಿವರಿಸಿದರು.

ದ.ಕ. ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಎಸ್ಪಿಯವರ ಜೊತೆ ಸಮಾಲೋಚನೆ ಮಾಡಿದ್ದೇವೆ ಎಂದು ಹೇಳಿದರು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಳಿಕ ಕಾನೂನು- ಸುವ್ಯವಸ್ಥೆ ನಿರ್ವಹಿಸುವ ನೆಪವನ್ನೊಡ್ಡಿ, ಆಡಳಿತ ಪಕ್ಷವಾದ ಕಾಂಗ್ರೆಸ್, ಪೊಲೀಸ್ ಇಲಾಖೆ ಮೂಲಕ ಗೂಂಡಾವರ್ತನೆ ನಡೆಸುತ್ತಿದೆ. ಪೊಲೀಸರು ಮಧ್ಯರಾತ್ರಿ ನಮ್ಮ ಕಾರ್ಯಕರ್ತರ ಮನೆಗೆ ಭೇಟಿ ಕೊಡುತ್ತಿದ್ದಾರೆ. ಸುಳ್ಯ ಮತ್ತಿತರ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶ್ವಹಿಂದೂ ಪರಿಷತ್ತು, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮುಖಂಡರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಎನ್ಐಎ ತನಿಖೆ- ಕೇಂದ್ರ ಸರಕಾರಕ್ಕೆ ಕೃತಜ್ಞತೆ

ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಮೂಲಕ ಕಾಂಗ್ರೆಸ್ ಸರಕಾರ ಗೂಂಡಾವರ್ತನೆ ಮಾಡುತ್ತಿದೆ. ಸುಹಾಸ್ ಶೆಟ್ಟಿ ಕೊಲೆ ಸಂಬಂಧ ನಾವು ಇಲ್ಲಿಗೆ ಭೇಟಿ ಕೊಟ್ಟಿದ್ದೆವು. ಅಲ್ಲದೆ ಎನ್ಐಎಗೆ ತನಿಖೆ ವಹಿಸಲು ಮಾನ್ಯ ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಮಾಡಿದ್ದೆವು. ಸುಹಾಸ್ ಶೆಟ್ಟಿ ಅವರ ತಾಯಿ, ಕುಟುಂಬದವರೂ ಬಂದಿದ್ದರು. ಆದರೆ, ರಾಜ್ಯ ಸರಕಾರ ಇದ್ಯಾವುದಕ್ಕೂ ಮಣಿಯಲಿಲ್ಲ ಎಂದು ವಿಜಯೇಂದ್ರ ಅವರು ಟೀಕಿಸಿದರು.

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ವಿದೇಶದಿಂದ ಹಣ ಬಂದ ಮಾಹಿತಿ ಸಿಗುತ್ತಿದೆ. ಎಸ್ಡಿಪಿಐ, ಪಿಎಫ್ಐನ ದುಷ್ಟ ಶಕ್ತಿಗಳು ಇದರ ಹಿಂದೆ ಇರುವ ವಿಚಾರ ಗೊತ್ತಿದ್ದರೂ, ಸಮರ್ಪಕ ತನಿಖೆ ಆಗುತ್ತಿಲ್ಲ ಎಂಬ ಚರ್ಚೆ ನಡೆದರೂ ರಾಜ್ಯ ಸರಕಾರ ಇದನ್ನು ಎನ್ಐಎಗೆ ನೀಡಿರಲಿಲ್ಲ. ನಮ್ಮ ಕೇಂದ್ರ ಸರಕಾರವು ನಿನ್ನೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಿದೆ. ಇದು ಸ್ವಾಗತಾರ್ಹ ಮತ್ತು ಕೇಂದ್ರ ಸರಕಾರಕ್ಕೆ, ಗೃಹ ಸಚಿವ ಅಮಿತ್ ಶಾ ಜೀ ಅವರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.

ಪೊಲೀಸರು ರಾತ್ರಿ 3 ಗಂಟೆಗೆ ಹೋಗಿ ಹಿಂದೂ ಮುಖಂಡರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಅವರ ಭಾವಚಿತ್ರವನ್ನು ತೆಗೆಯುತ್ತಿದ್ದಾರೆ. ಮುಖಂಡರು ಒಂದು ಮನೆಯಲ್ಲಿ ಇಲ್ಲವೆಂದಾದ ಸಂದರ್ಭದಲ್ಲಿ ಲೇಡಿ ಕಾನ್ಸ್ಟೆಬಲ್ ಒಬ್ಬರು ರಿವಾಲ್ವರ್ ತೋರಿಸಿ ತಂದೆ- ತಾಯಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಮಗ ಓಡಾಡಲು ಆಗುವುದಿಲ್ಲ; ಊಟ ಮಾಡಲು ಕೂಡ ಸಾಧ್ಯವಿಲ್ಲ; ನಿದ್ರೆ ಮಾಡಲು ಬಿಡುವುದಿಲ್ಲ ಎಂದಿದ್ದು, ದಕ್ಷಿಣ ಕನ್ನಡದಲ್ಲಿ ಗೂಂಡಾವರ್ತನೆ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವು ಕೆಲವು ದಿನಗಳ ಹಿಂದೆ ಕೋಮು ನಿಗ್ರಹ ದಳ ರಚಿಸಿದ್ದು, ಹಿಂದೂ ಕಾರ್ಯಕರ್ತರ ಮೇಲಿನ ಟಾರ್ಗೆಟ್ ಮಾಡುವುದು ಹೆಚ್ಚಾಗಿದೆ ಎಂದು ತಿಳಿಸಿದರು. ಕೋಮು ನಿಗ್ರಹ ದಳ ರಚಿಸಿದ್ದೇ ಹಿಂದೂ ಕಾರ್ಯಕರ್ತರ ಮೇಲಿನ ಟಾರ್ಗೆಟ್ ಮಾಡುವ ದುರುದ್ದೇಶದಿಂದ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಬಿ.ಕೆ.ಹರಿಪ್ರಸಾದ್ ಅವರ ನೇತೃತ್ವದಲ್ಲಿ ಸತ್ಯ ಸಂಶೋಧನಾ ಸಮಿತಿ ರಚಿಸಿದೆ. ಕರಾವಳಿ ಬಿಜೆಪಿ ಭದ್ರಕೋಟೆ. ಹಿಂದೂ, ಪರಿವಾರ ಸಂಘಟನೆಗಳ ಭದ್ರಕೋಟೆ, ನಮ್ಮ ಕಾರ್ಯಕರ್ತರನ್ನು ಭಯ ಪಡಿಸಲು ಟಾರ್ಗೆಟ್ ಮಾಡುವ ಷಡ್ಯಂತ್ರ ನಡೆದಿದೆ. ಸಿನಿಮೀಯ ರೀತಿಯಲ್ಲಿ ಸುಹಾಸ್ ಶೆಟ್ಟಿ ಭಯಾನಕ ಕೊಲೆ ನಡೆದಿದೆ. ಬುರ್ಖಾಧಾರಿಗಳ ಭಾಗವಹಿಸುವಿಕೆಯೂ ಇದ್ದುದು ಎಲ್ಲರಿಗೂ ತಿಳಿದಿದೆ. ಹಿಂದೂ ಕಾರ್ಯಕರ್ತನ ಹತ್ಯೆ ಹಿಂದೆ ಯಾರಿದ್ದಾರೆ ಎಂದು ಹುಡುಕಲು ಪೊಲೀಸ್ ಇಲಾಖೆಗೆ ಹತ್ತಾರು ದಿನಗಳು ಬೇಕಾಗುತ್ತದೆ. ಮುಸಲ್ಮಾನರು ತೀರಿಕೊಂಡರೆ ರಾತ್ರೋರಾತ್ರಿ ಎಫ್ಐಆರ್ ಮಾಡಿ, ಹಿಂದೂ ಕಾರ್ಯಕರ್ತರು ಕೇಸಿನಲ್ಲಿ ಇದ್ದಾರಾ ಇಲ್ಲವೇ ಎಂಬುದು ಚರ್ಚೆ ಆಗುವುದಿಲ್ಲ ಎಂದು ಆಕ್ಷೇಪಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಶ್ರೀಮತಿ ಭಾಗೀರಥಿ ಮುರುಳ್ಯ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸ್ಥಳೀಯ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *