ಬೆಂಗಳೂರು: ಬೆಂಗಳೂರಿನಲ್ಲಿ ನಿತ್ಯ ವಿವಿಧ ಕಡೆಗಳಲ್ಲಿ ಕಾಮಗಾರಿ, ಕಾರ್ಯಕ್ರಮ ಹಾಗೂ ರಸ್ತೆ ದುರಂತೆ, ವೈಟ್ ಟಾಪಿಂಗ್ ನಂತಹ ಕೆಲಸಗಳು ನಡೆಯುತ್ತವೆ. ಆದ್ದರಿಂದ ಸಂಚಾರ ಸಲಹೆ ನೀಡಲಾಗುತ್ತದೆ. ಇದೀಗ ನಗರದ ಎರಡು ಭಾಗಗಳಲ್ಲಿ ಈ ಪ್ರಮುಖ ಕಾರಣಗಳಿಂದಾಗಿ ಸಂಚಾರ ಅಡಚಣೆ ಉಂಟಾಗಲಿದ್ದು, ವಾಹನ ಸವಾರರು ಪರ್ಯಾಯ ಮಾರ್ಗ ಅನುಸರಿಸುವಂತೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಕೋರಿದ್ದಾರೆ.

ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ (WOC) ನಲ್ಲಿ ವಿಜಯನಗರ ಬಸ್ ನಿಲ್ದಾಣ ಸಿಗ್ನಲ್ ನಿಂದ ವಿಜಯನಗರ ಟಿಟಿಎಂಸಿ ಬಸ್ ನಿಲ್ದಾಣದ ಜಂಕ್ಷನ್ ವರೆಗೆ ಸುಮಾರು 950 ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಮತ್ತು ವಾಹನಗಳ ಸವಾರರ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಮಾರ್ಚ್ 14/03/2025 ರ ರಾತ್ರಿ 10 ಗಂಟೆಯಿಂದಲೇ 02 ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇದೀಗ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ವಾಹನ ಸಂಚಾರ ನಿರ್ಬಂಧಿತ ರಸ್ತೆಗಳ ವಿವರ * ವೆಸ್ಟ್ ಆಫ್ ಕಾರ್ಡ್ ರೋಡ್ನಲ್ಲಿ ವಿಜಯನಗರ ಬಸ್ ನಿಲ್ದಾಣ ಸಿಗ್ನಲ್ ನಿಂದ ವಿಜಯನಗರ ಟಿಟಿಎಂಸಿ ಬಸ್ ನಿಲ್ದಾಣದ (ವಿಜಯನಗರ ಕಡೆಯಿಂದ ಮೈಸೂರು ರಸ್ತೆ ) ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಈ ಕೆಳಗಿನ ರೂಟ್ ಅನುಸರಿಸಬೇಕಿದೆ. ಈ ವಾಹನ ಸವಾರರು ಪರ್ಯಾಯ ಸಂಚಾರ ಮಾರ್ಗವಾದ ವೆಸ್ಟ್ ಆಫ್ ಕಾರ್ಡ್ ರೋಡ್ ಮೂಲಕ ಚಂದ್ರಾಲೇಔಟ್, ಮೈಸೂರುರಸ್ತೆ, ಕಡೆಗೆ ಚಲಿಸುವ ಎಲ್ಲಾ ವಾಹನಗಳು ವೆಸ್ಟ್ ಆಫ್ ಕಾರ್ಡ್ ರೋಡ್ ಪಿ&ಟಿ ಜಂಕ್ಷನ್ ಹತ್ತಿರ / ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಾಲೆ ಹತ್ತಿರ ಎಡಭಾಗದ ಸರ್ವೀಸ್ ರಸ್ತೆಗೆ ಸಾಗಿ, ಸರ್ವಿಸ್ ರಸ್ತೆಯ ಮೂಲಕ ವಿಜಯನಗರ ಟಿಟಿಎಂಸಿ ಜಂಕ್ಷನ್ ವರೆಗೆ ಹೋಗಿ ಮತ್ತೆ ವೆಸ್ಟ್ ಆಫ್ ಕಾರ್ಡ್ ರೋಡ್ಗೆ ಹೋಗಿ ಮುಂದೆ ಸಂಚರಿಸಬಹುದು.
ಏಪ್ರಿಲ್ 25ರವರೆಗೆ ಸಂಚಾರ ತೊಂದರೆ ನಗರದ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡ ಬಾಣಸವಾಡಿ ಮುಖ್ಯ ರಸ್ತೆಯಲ್ಲಿರುವ ಶ್ರೀ.ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ ಶ್ರೀ ಕೋದಂಡರಾಮಸ್ವಾಮಿ ದೇವರ ಬ್ರಹ್ಮರಥೋತ್ಸವ ಜಗರುಲಿದೆ. ದೇವರ ಪಲ್ಲಕ್ಕಿಗಳ ಉತ್ಸವ ಹಾಗೂ ಕರಗ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹೀಗಾಗಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಮಾಡಿದ್ದು, ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಸೂಚಿಸಿದ್ದಾರೆ. ಈ ಮಾರ್ಗದಲ್ಲಿ ಇಂದಿನಿಂದ (ಏಪ್ರಿಲ್ 22ರಿಂದ 25ವರೆಗೆ) ಶುಕ್ರವಾರ ಬೆಳಗ್ಗೆ 08.00 ಗಂಟೆಯವರೆಗೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಯಾವೆಲ್ಲ ರಸ್ತೆಗಳಲ್ಲಿ ನಿರ್ಬಂಧಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಸಂಚಾರ ನಿಷೇಧಿತ ರಸ್ತೆಗಳು * ದೊಡ್ಡ ಬಾಣಸವಾಡಿ ಮುಖ್ಯ ರಸ್ತೆ, (ಮುಕುಟಮ್ಮ ದೇವಾಸ್ಥಾನ ಬಸ್ ನಿಲ್ದಾಣದಿಂದ ಸ್ಟೀಲ್ ಫ್ಯಾಕ್ಟರಿ ಬಸ್ ನಿಲ್ದಾಣದವರೆಗೆ) ಸಂಚರಿಸುವಂತಿಲ್ಲ. ಪರ್ಯಾಯ ಸಂಚಾರ ಮಾರ್ಗ ಯಾವುದು? * ರಾಮಮೂರ್ತಿನಗರ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ದೊಡ್ಡ ಬಾಣಸವಾಡಿ ಮುಖ್ಯ ರಸ್ತೆಯ ಮುಕುಟಮ್ಮ ದೇವಸ್ಥಾನದ ಬಳಿ ಬಲ ತಿರುವು ಪಡೆಯಬೇಕು. ಅಲ್ಲಿಂದ ಹೊರಮಾವು ಜಂಕ್ಷನ್ ತಲುಪಿ ಅಲ್ಲಿಂದ 100 ಅಡಿ ರಸ್ತೆ ಕಡೆಗೆ ಎಡ ತಿರುವು ಮೂಲಕ ಸದರಿ 100 ಅಡಿ ರಸ್ತೆ ಮೂಲಕ ವೇಮಣ್ಣ ಜಂಕ್ಷನ್ ತಲುಪಬೇಕು. ಅಲ್ಲಿಂದ ಬಾಣಸವಾಡಿ ಮುಖ್ಯ ರಸ್ತೆ ಕಡೆಗೆ ಬಲ ತಿರುವು ಪಡೆದು ಬೆಂಗಳೂರು ನಗರದ ಕಡೆಗೆ ಹೋಗಬಹುದಾಗಿದೆ.
* ಬೆಂಗಳೂರು ನಗರದಿಂದ ಬಾಣಸವಾಡಿ ಮುಖ್ಯರಸ್ತೆ ಮೂಲಕ ರಾಮಮೂರ್ತಿನಗರ ಹಾಗೂ ಕೆ.ಆರ್.ಪುರ ಕಡೆಗೆ ಸಂಚರಿಸುವ ವಾಹನ ಸವಾರರು ಬಾಣಸವಾಡಿ ಮುಖ್ಯ ರಸ್ತೆ ಮೂಲಕ ವೇಮಣ್ಣ ಜಂಕ್ಷನ್ ತಲುಪಬೇಕು. ಅಲ್ಲಿಂದ ನೇರ ಸ್ಟೀಲ್ ಫ್ಯಾಕ್ಟರಿ ಬಳಿ ಬಲ ತಿರುವು ಪಡೆದು ಭುವನಗಿರಿ ರಸ್ತೆ ಮೂಲಕ ರಾಮಮೂರ್ತಿನಗರ ಹೊರವರ್ತುಲ ರಸ್ತೆ ಮೂಲಕ ಸಾಗಿ ಮುಂದೆ ಹೋಗಬಹುದಾಗಿದೆ. ಪಾರ್ಕಿಂಗ್ ನಿರ್ಬಂಧಿತ ಸ್ಥಳಗಳು ದೊಡ್ಡಬಾಣಸವಾಡಿ ಮುಖ್ಯ ರಸ್ತೆಯ ಮುಕುಟಮ್ಮ ದೇವಸ್ಥಾನ ಕ್ರಾಸ್ನಿಂದ ವಿಜಿಸ್ ಗ್ಯಾಸ್ ಬಂಕ್ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧ ಮಾಡಲಾಗಿದೆ. ವಾಹನ ಸವಾರರು ಈ ಮೇಲಿನ ಎಲ್ಲ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತವಾಗಿ ಸಂಚರಿಸುವಂತೆ ಬೆಂಗಳೂರು ನಗರ ಪೊಲೀಸರು ಮನವಿ ಮಾಡಿದ್ದಾರೆ.