ಮುಡಾ ಹಗರಣ ಪ್ರಕರಣ || ಸಿಎಂ ರಾಜೀನಾಮೆ ನೀಡಬೇಕು : ಸಿಟಿ ರವಿ ಆಗ್ರಹ

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಇಡೀ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಕೆಂಪಣ್ಣ ಆಯೋಗದ ವರದಿ ಮಂಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರೀಡೂ ಪ್ರಕರಣದ ರೀತಿ ಮುಡಾ ಪ್ರಕರಣ ಮುಚ್ಚಿ ಹೋಗಬಾರದು ಎಂದರು.

ಪ್ರಕರಣ ಮುಚ್ಚಿಹಾಕುವ ಕಾರಣಕ್ಕಾಗಿಯೇ ಕಡತಗಳೇ ನಾಪತ್ತೆಯಾಗಿವೆ. ಹೆಲಿಕ್ಯಾಪ್ಟರ್​ನಲ್ಲಿ ತಂದ ಕಡತಗಳೆಷ್ಟು, ಅವು ಯಾವುವು ಎಂದು ಸ್ಕ್ಯಾನಿಂಗ್ ಮಾಡಿ ಕಡತ ರಕ್ಷಿಸುವ ಕೆಲಸವಾಗಿದೆಯಾ?. ಆ ಕಡತಗಳು ಎಲ್ಲಿ ಹೋದವು? ಯಾರೋ ಇಬ್ಬರು ಅಧಿಕಾರಿಗಳ ನೇಮಕ ಮಾಡಿ ತನಿಖೆ ಎಂದರೆ ಆ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ, ನರಗಾಭಿವೃದ್ಧಿ ಸಚಿವ ಬೈರತಿ ಸುರೇಶ್ ವಿರುದ್ಧ ವರದಿ ಕೊಡುತ್ತಾರಾ?. ಚುನಾವಣಾ ಆಯೋಗಕ್ಕೆ 2013 ರಲ್ಲಿ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರ ಮತ್ತು 2018ರ ಅಫಿಡವಿಟ್ ಓದಿ, 2010ರಲ್ಲಿಯೇ ಹರಿಶಿಣ ಕುಂಕುಮಕ್ಕೆ ಆ ಜಾಗವನ್ನು ನಿಮ್ಮ ಪತ್ನಿಗೆ ಕೊಟ್ಟಿದ್ದರೆ ಅದನ್ನು ಯಾಕೆ ಉಲ್ಲೇಖ ಮಾಡಿಲ್ಲ. ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ತಮ್ಮ 40 ವರ್ಷದ ಆಡಳಿತದ ಅನುಭವದಲ್ಲಿ ಲೂಟಿ ಹೊಡೆಯಲು ಹೊಸ ಹೊಸ ದಾರಿ ಅನ್ವೇಷಣೆ ಮಾಡಿದ್ದಾರೆ. ಜನರಿಗೆ ಸಹಾಯಕವಾಗದೇ ಲೂಟಿ ಹೊಡೆಯಲು ಹೊಸ ಹೊಸ ಮಾರ್ಗ ಹುಡುಕಿದ್ದೀರಿ ಎನ್ನುವಂತಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡರೂ ನಾನು ಕಳ್ಳ ಅಲ್ಲ ಎಂದರೆ ಯಾರೂ ನಂಬಲ್ಲ.

ಈ ಪ್ರಕರಣದಲ್ಲಿ ಕಾನೂನಾತ್ಮಕ ಪ್ರಕ್ರಿಯೆ ನಂತರ ಮೊದಲು ನೈತಿಕ ಹೊಣೆ ಹೊರಬೇಕು. ರಾಜ್ಯದ ಆಡಳಿತದ ಮುಖ್ಯಸ್ಥರಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಹಿಂದೆ, ನಮ್ಮ ವರಿಷ್ಠ ನಾಯಕ ಅಡ್ವಾಣಿ ಸಂಸದರಾಗಿದ್ದ ವೇಳೆ ಹವಾಲಾ ಡೈರಿಯಲ್ಲಿ ಎಲ್.ಕೆ.ಎ ಎಂದಿತ್ತು, ಅಡ್ವಾಣಿ ಎನ್ನುವ ಹೆಸರೂ ಕೂಡ ಇರಲಿಲ್ಲ ಕೆಲವರು ಇದು ಅಡ್ವಾಣಿ ಎಂದರು ಆಗ ಅಡ್ವಾಣಿ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಆರೋಪಮುಕ್ತ ಆಗುವವರೆಗೂ ಚುನಾವಣೆಗೆ ನಿಲ್ಲಲ್ಲ ಎಂದಿದ್ದರು. ಆದರೆ, ನೀವು ಎಲ್ಲ ದಾಖಲೆಗಳಿದ್ದರೂ ಭಂಡತನದಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ. ನೀವು ಇಲ್ಲಿ ಪಾರದರ್ಶನಕವಾಗಿ, ಪ್ರಾಮಾಣಿಕವಾಗಿ ನಡೆದುಕೊಂಡಿಲ್ಲ, ನೀವು ನಿರಪರಾಧಿ ಹೌದೋ ಅಲ್ಲವೋ ತೀರ್ಮಾನವಾಗುವವರೆಗೂ ನೀವು ಅಪರಾಧಿಯೇ ಹಾಗಾಗಿ ನೀವು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು

Leave a Reply

Your email address will not be published. Required fields are marked *