ಮೈಸೂರು: ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಆರಂಭಿಸಿದರು. ರಾಜ ಪೋಷಾಕು ಧರಿಸಿ ಯದುವೀರ್ ದರ್ಬಾರ್ ಹಾಲ್ ಪ್ರವೇಶಿಸುತ್ತಿದ್ದಂತೆ, ವಂಧಿ ಮಾಗದರು ಬಹು ಪರಾಕ್ ಕೂಗಿದರು.
ಬಳಿಕ ಸಿಂಹಾಸನದ ಬಳಿ ತೆರಳಿ ಸಿಂಹಾಸನಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು, ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಬಳಿಕ ಯದುವೀರ್ ಸಿಂಹಾಸನಾರೂಢರಾದರು.
ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಅವರು ಯದುವೀರ್ ಅವರ ಪಾದಪೂಜೆ ಮಾಡಿದರು. ಅರಮನೆಯ ದೇವಸ್ಥಾನಗಳಾದ ಚಾಮುಂಡಿಬೆಟ್ಟ, ಉತ್ತನಹಳ್ಳಿ ಬೆಟ್ಟ ಸೇರಿದಂತೆ ಹಲವು ದೇವಸ್ಥಾನಗಳಿಂದ ತಂದಿದ್ದ ಪ್ರಸಾದಗಳನ್ನು ಯದುವೀರ್ ಸ್ವೀಕಾರ ಮಾಡಿದರು.