ಮೈಸೂರು: ಮೈಸೂರು ಇನ್ಫೋಸಿಸ್ ಡಿಸಿ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಕ್ಯಾಂಪಸ್ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ. ಕಂಪನಿ ಆಡಳಿತ ಮಂಡಳಿ, ಉದ್ಯೋಗಿಗಳು ಆತಂಕದಲ್ಲಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಕಂಪನಿಯು ಮಂಗಳವಾರ ಡಿಸೆಂಬರ್ 31ರಂದು ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿದೆ.
ಸದ್ಯ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಸುತ್ತಮುತ್ತ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಕ್ಯಾಂಪಸ್ ಸುರಕ್ಷತೆಯನ್ನು ಪರಿಶೀಲಿಸಲಾಗುತ್ತಿದೆ. ಚಿರತೆಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಇನ್ಫೋಸಿಸ್ ಕಂಪನಿ ಮಾನವ ಸಂಪನ್ಮೂಲ ವಿಭಾಗದ ಸದಸ್ಯರು ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಕಂಪನಿ ಪ್ರಕಾರ, ಇಂದು ನೀವೆಲ್ಲರು ಮನೆಯಿಂದ ಕೆಲಸ ಮಾಡಬೇಕು. ಯಾರು ಸಹ ಕ್ಯಾಂಪಸ್ಗೆ ಬಾರದಂತೆ ನೋಡಿಕೊಳ್ಳಲು ಟೀಂ ಲೀಡ್ಗೆ ಮಾಹಿತಿ ರವಾನಿಸಲಾಗಿದೆ. ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಸಂಬಂಧ ಅರಣ್ಯ ಇಲಾಖೆ ಸಹಕಾರದಲ್ಲಿ ಚಿರತೆ ಪತ್ತೆಗೆ ಶೋಧ ನಡೆಯುತ್ತಿದ್ದು, ಕ್ಯಾಂಪಸ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ. 150 ಎಕರೆ ಪ್ರದೇಶ ಕ್ಯಾಂಪಸ್ ಮೈಸೂರಿನಲ್ಲಿರುವ ಇನ್ಫೋಸಿಸ್ ಕ್ಯಾಂಪಸ್ ಬರೋಬ್ಬರಿ 150 ಎಕರೆ ಪ್ರದೇಶದಲ್ಲದೆ. ಎಲ್ಲ ಕಡೆಗೂ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಚಿರತೆ ಪತ್ತೆಗೆ ಹಾಗೂ ಸೆರೆ ಹಿಡಿಯಲು ವಿಶೇಷ ಕಾರ್ಯಪಡೆ ನಿಯೋಜಿಸಿದ್ದಾರೆ. ತ್ವರಿತವಾಗಿ ಸುರಕ್ಷತೆ ಒದಗಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉಪಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ಅವರು, ಮಂಗಳವಾರ ಬೆಳ್ಳಂಬೆಳಗ್ಗೆ 2 ಗಂಟೆ ಸುಮಾರಿಗೆ ಚಿರತೆ ಓಡಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಸುಮಾರು ಬೆಳಗ್ಗೆ 4 ಗಂಟೆಗೆ ಹೊತ್ತಿಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಫ್ಟವೇರ್ ಬಹುದೊಡ್ಡ ಕಂಪನಿಗಳ ಆವರಣದಲ್ಲಿ ಚಿರತೆ ಕಾಣುವುದು, ಕ್ಯಾಂಪಸ್ ಒಳಕ್ಕೆ ಬಂದು ಹೋಗುವುದು ಇದೇ ಮೊದಲೇನಲ್ಲ. 2011ರಲ್ಲೂ ಇದೇ ಕ್ಯಾಂಪಸ್ನಲ್ಲಿ ಚಿರತೆ ಕಾಣಸಿಕೊಂಡಿತ್ತು ಎನ್ನಲಾಗಿದೆ. ಇನ್ಫೋಸಿಸ್ ಕ್ಯಾಂಪಸ್ ಮೀಸಲು ಅರಣ್ಯ ಪ್ರದೇಶಕ್ಕೆ ಹತ್ತಿರದಲ್ಲಿದೆ. ಈ ಅರಣ್ಯದ ಭಾಗವು ಹಿಂದಿನಿಂದಲೇ ಚಿರತೆ ವಾಸಸ್ಥಾಣವಾಗಿದೆ.ಹೀಗಾಗಿ ಆಗಾಗ ಕ್ಯಾಂಪಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಿರತೆಗಳು ಕಾಣುತ್ತಿವೆ. ಆಹಾರ ಅರಸಿ ಬಂದು ದಾರಿ ತಪ್ಪಿ ಕ್ಯಾಂಪಸ್ ಒಳಗೆ ಬಂದಿರುವ ಶಂಕೆ ಇದೆ. ಕೂಡಲೇ ಎಲ್ಲ ಸಿಸಿಟಿವಿ ಪರಿಶೀಲಿಸಿ ಸುರಕ್ಷತೆಯನ್ನು ಖಚಿತಪಡಿಸಲಾಗುವುದು ಎಂದು ಅರಣ್ಯಧಿಕಾರಿಗಳು ಹೇಳಿದ್ದಾರೆ.
ಪ್ರಶಿಕ್ಷಣಾರ್ಥಿಗಳಿಗೆ ರಜೆ ಘೋಷಣೆ
ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಎಜುಕೇಶನ್ ಸೆಂಟರ್ನಲ್ಲಿರುವ ಸುಮಾರು 4,000 ಪ್ರಶಿಕ್ಷಣಾರ್ಥಿಗಳಿಗೆ ಇಂದು ಮನೆಯೊಳಗೆ ಇರುವಂತೆ ತಿಳಿಸಲಾಗಿದೆ. ಅವರಿಗೆ ರಜೆ ನೀಡಲಾಗಿದೆ. ಉಳಿದ ಮನೆಯಿಂದ ಕೆಲಸ, ರಜೆ ಸೇರಿದಂತೆ ಉಳಿದ ಎಲ್ಲ ಕೆಲಸಗಳು ಇಂದು ಸ್ಥಗಿತಗೊಳ್ಳಲಿವೆ. ಯಾರೊಬ್ಬರು ಕ್ಯಾಂಪಸ್ನೊಳಗೆ ಓಡಾದಂತೆ ಕಟ್ಟೆಚ್ಚರ ವಹಿಸಲಾಗಿದೆ.