ಮೈಸೂರು || ‘ನಾರ್ತ್ ಇಂಡಿಯನ್ಸ್ ಬೇರೆ ರಾಜ್ಯಗಳಲ್ಲಿ ಯಾಕೆ ಬಾಲ ಬಿಚ್ಚಲ್ಲ?’

ಮೈಸೂರು || 'ನಾರ್ತ್ ಇಂಡಿಯನ್ಸ್ ಬೇರೆ ರಾಜ್ಯಗಳಲ್ಲಿ ಯಾಕೆ ಬಾಲ ಬಿಚ್ಚಲ್ಲ?'

ಮೈಸೂರು: ಬೆಂಗಳೂರಿನಲ್ಲಿ ಕನ್ನಡಿಗನ ಮೇಲೆ ವಿಂಗ್ಕಮಾಂಡರ್ನಿಂದ ಮಾರಣಾಂತಿಕ ಹಲ್ಲೆ ವಿಚಾರವಾಗಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ್ ಖಂಡನೆ ವ್ಯಕ್ತಪಡಿಸಿದ್ದಾರೆ. ಇದೇ ಉತ್ತರ ಭಾರತೀಯರು ಬೇರೆ ರಾಜ್ಯಗಳಲ್ಲಿ ಏಕೆ ಬಾಲ ಬಿಚ್ಚಲ್ಲ? ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ. ಈ ಉತ್ತರ ಭಾರತೀಯರು ಚೆನ್ನೈನಲ್ಲಿ ಏಕೆ ಬಾಲ ಬಿಚ್ಚಲ್ಲ? ಪಕ್ಕದ ಕೇರಳಕ್ಕೆ ಯಾಕೆ ಹೋಗಲ್ಲ? ಎಂದು ಗರಂ ಆಗಿದ್ದಾರೆ.

ಇಂದು ತಮಿಳುನಾಡಿನಲ್ಲೂ ಹಲವು ಉದ್ಯಮಗಳಿವೆ. ಸಾಫ್ಟ್ವೇರ್, ಉತ್ಪಾದನಾ ಕ್ಷೇತ್ರದಲ್ಲಿದ್ದಾರೆ. ಅಲ್ಲಿಯೂ ಹಲವು ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಅಲ್ಲಿಯೂ ಉತ್ತರ ಭಾರತೀಯರು ಇದ್ದಾರೆ. ಅಲ್ಲೆಲ್ಲ ಏಕೆ ಇವರು ಬಾಲ ಬಿಚ್ಚೋದಿಲ್ಲ ಎಂದು ಗುಡುಗಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಏನು ನಿಮ್ ದರ್ಪ? ಎಂದು ಕೇಳಿದ್ದಾರೆ.

ಅದರಲ್ಲೂ ದೆಹಲಿ, ಮುಂಬೈ ಮೂಲದ ಮಾಧ್ಯಮಗಳು ಕೂಡ ಈ ವಿಚಾರವನ್ನು ಕೂಡಲೇ ದೊಡ್ಡದು ಮಾಡಿ ಉತ್ತರ ಭಾರತೀಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಬಿಂಬಿಸಿದ್ದಾರೆ. ಕನ್ನಡಿಗರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಯಾವುದೇ ವಿಚಾರವನ್ನು ಮೊದಲು ಪರಿಶೀಲಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಉತ್ತರ ಭಾರತೀಯರೇ ಆಗಲಿ, ತಮಿಳರೇ ಆಗಲಿ, ತೆಲುಗು ಭಾಷಿಕರೇ ಆಗಲಿ, ಮಲಯಾಳಿಗಳನ್ನಾಗಲಿ ನಾವು ನಮ್ಮ ಕರ್ನಾಟಕಕ್ಕೆ ಬನ್ನಿ, ನಮಗೆ ಗತಿ ಇಲ್ಲ ಎಂದು ಹೇಳಿಲ್ಲ. ನೀವೆಲ್ಲ ನಿಮ್ಮ ರಾಜ್ಯಗಳಲ್ಲಿ ಗತಿ ಇಲ್ಲದೆ ಕರ್ನಾಟಕಕ್ಕೆ ಬಂದವರು. ಇಲ್ಲಿ ನೆಲೆ ಕಾಣೋಕೆ ನೀವು ಬಂದಿದ್ದು, ನಿಮ್ಮ ಕೈಕಾಲು ನಾವು ಹಿಡಿದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಕೇರಳದವರು ಕೂಡ ರಾತ್ರಿ ವೇಳೆ ಬಂಡೀಪುರದಲ್ಲಿ ಓಡಾಟಕ್ಕೆ ಅವಕಾಶ ಕೊಡಿ ಅಂತ ಕೂತಿದ್ದಾರೆ. ಯಾಕಂದ್ರೆ ಅವರಿಗೆ ತಿನ್ನೋಕೆ ಗತಿಯೇ ಇಲ್ಲ. ಬೇರೆ ಬೇರೆ ರಾಜ್ಯದವರು ನಿಮ್ಮ ರಾಜ್ಯಗಳಲ್ಲಿ ಒಳ್ಳೆಯ ವ್ಯವಸ್ಥೆ ಇಲ್ಲದಿರುವ ಕಾರಣಕ್ಕೆ ಇಲ್ಲಿಗೆ ಗತಿಗೆಟ್ಟು ಬರುತ್ತಿದ್ದೀರಿ. ನೀವೆಲ್ಲ ನಮಗೆ ಪಾಠ ಹೇಳೋಕೆ ಬರಬೇಡಿ. ಕನ್ನಡಿಗರ ಸಾಫ್ಟ್ ಆಗಿ ಇರ್ತಾರೆ ಅಂತ ನೀವು ಏನು ಬೇಕಾದ್ರೂ ಮಾಡಬಹುದು ಎಂದು ಅಂದುಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ನೀವೇನಾದರೂ ಕನ್ನಡಿಗರ ಮೇಲೆ ಸವಾರಿ ಮಾಡಬಹುದು ಅಂದುಕೊಂಡಿದ್ದರೆ ನಾವು ಬಗ್ಗೋರಲ್ಲ. ಕನ್ನಡಿಗರು ಯಾವತ್ತು ವಾಪಸ್ ತಿರುಗಿ ಬೀಳ್ತಾರೋ ಆವತ್ತು ನಿಮಗೆ ಉಳಿಗಾಲವಿರೋದಿಲ್ಲ ಅನ್ನೋದು ಕಾವೇರಿ ಗಲಾಟೆಯಾದಾಗ ತಮಿಳುನಾಡಿನವರಿಗೆ ಅನುಭವಕ್ಕೆ ಬಂದಿದೆ. ಅಂತಹ ಪರಿಸ್ಥಿತಿಯನ್ನು ನೀವು ಮತ್ತೊಮ್ಮೆ ತಂದಿಟ್ಟುಕೊಳ್ಳಬೇಡಿ. ಎಲ್ಲ ಭಾಷೆಯವರಿಗೂ ಇದನ್ನೇ ಹೇಳುತ್ತಿದ್ದೇನೆ, ಕನ್ನಡಿಗರ ತಾಳ್ಮೆಯನ್ನು ಪರಿಶೀಲಿಸಲು ಹೋದರೆ ಯಾರನ್ನ ಬೇಕಾದರೂ ಬಡಿದು ಓಡಿಸೋ ಶಕ್ತಿ ಇದೆ ಎಂದು ನೇರವಾಗಿ ವಾರ್ನಿಂಗ್ ಕೊಟ್ಟಿದ್ದಾರೆ.

ಕನ್ನಡಿಗರ ಸರ್ಕಾರ ಕರ್ನಾಟಕದಲ್ಲಿದೆ:ಸಿಎಂ ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗಳಿಗೆ ಒಳಗಾಗಿ, ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೇ ಸರ್ಕಾರ ಕರ್ನಾಟಕದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಈ ಘಟನೆ ಉಲ್ಲೇಖಿಸಿ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿರಲಿ, ಯಾವ ಹುದ್ದೆಯಲ್ಲೇ ಇರಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಿದ್ದೇನೆ. ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅನ್ಯಾಯಕ್ಕೊಳಗಾದ ವ್ಯಕ್ತಿಗೆ ನ್ಯಾಯ ಕೊಡಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *