ಮೈಸೂರು: “ಮಹಾ ಶಿವರಾತ್ರಿ”ಯ ದಿನ ಅಂಬಾವಿಲಾಸ್ ಅರಮನೆಯ ಮುಂಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ತ್ರಿನೇಶ್ವರ ಸ್ವಾಮಿಗೆ 11 ಕೆ.ಜಿ. ತೂಕದ ಚಿನ್ನದ ಮುಖವಾಡ ಧಾರಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಇದು ವರ್ಷಕ್ಕೆ ಒಂದು ಬಾರಿ ಮಾತ್ರ ಶಿವರಾತ್ರಿಯ ದಿನ ಹಾಕಲಾಗುತ್ತದೆ.
ವಿಶ್ವವಿಖ್ಯಾತ ಅಂಬಾವಿಲಾಸ್ ಅರಮನೆಯ ಮುಂಭಾಗದ ಪೂರ್ವ ದಿಕ್ಕಿನಲ್ಲಿ ಅಂದರೆ ಜಯಮಾರ್ತಾಂಡ ದ್ವಾರದ ಬಲ ಭಾಗದಲ್ಲಿ ತ್ರಿನೇಶ್ವರ ಸ್ವಾಮಿಯ ದೇವಾಲಯವಿದೆ. ತ್ರಿನೇಶ್ವರ ಎಂದರೆ ಮೂರು ಕಣ್ಣಿನ ಶಿವ ಎಂದರ್ಥ. ರಣಧೀರ ಕಂಠೀರವ ನರಸರಾಜ ಒಡೆಯರ್ ಹಾಗೂ ಒಂದನೇ ದೇವರಾಜ್ ಒಡೆಯರ್ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ತ್ರಿಣಬಿಂದು ಋಷಿ ಈ ಶಿವಲಿಂಗವನ್ನು ಸ್ಥಾಪಿಸಿದ್ದರಿಂದ ಈ ಲಿಂಗಕ್ಕೆ ತ್ರಿಣೇಶ್ವರ/ತ್ರಿನೇಶ್ವರ ಎಂಬ ಹೆಸರು ಬಂದಿದೆ. ಇದನ್ನು ಸಾ.ಶ. 1753 ರಲ್ಲಿ ಕಳಲೆ ನಂಜರಾಜನು ನಿರ್ಮಿಸಿದನು.
11 ಕೆ.ಜಿ. ತೂಕದ ಶಿವನ ಮುಖವಾಡ: ಮಹಾಶಿವರಾತ್ರಿ ದಿನ ಮಾತ್ರ ತ್ರಿನೇಶ್ವರ ಸ್ವಾಮಿಗೆ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡ ಹಾಕಿ ಪೂಜೆ ಸಲ್ಲಿಸುವುದು ವಿಶೇಷ. ಶಿವನ ಮುಖವಾಡ ಜಿಲ್ಲಾ ಖಜಾನೆಯಲ್ಲಿ ಇರಲಿದ್ದು, ಶಿವರಾತ್ರಿಯ ಹಿಂದಿನ ದಿನ ಬಿಗಿ ಭದ್ರತೆಯಲ್ಲಿ ತರಲಾಗುತ್ತದೆ. ತ್ರಿನೇಶ್ವರ ಸ್ವಾಮಿಗೆ ಧರಿಸಿ ಪೂಜೆ ಸಲ್ಲಿಸಿ ಮತ್ತೆ ಶಿವರಾತ್ರಿ ಮುಗಿದ ನಂತರ ತೆಗೆದುಕೊಂಡು ಹೋಗಿ ಖಜಾನೆಯಲ್ಲಿ ಇಡಲಾಗುವುದು.
ವರ್ಷ ವರ್ಷವೂ ನಡೆಯುತ್ತೆ ಚಿನ್ನದ ಕೊಳಗ ಧಾರಣೆ: “ತ್ರಿನೇಶ್ವರ ಸ್ವಾಮಿಗೆ ಪ್ರತಿ ವರ್ಷವೂ ಚಿನ್ನದ ಕೊಳಗ ದಾರಣೆ ಮಾಡಲಾಗುತ್ತದೆ. ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. 5 ಗಂಟೆಗೆ ರುದ್ರಾಭಿಷೇಕ, ಅಷ್ಟೋತ್ತರ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಶುದ್ಧ ಪುಣ್ಯಹ ಪೂಜೆ , ಕಳಶ ಪೂಜೆ , ಶಿವನಿಗೆ ಅಭಿಷೇಕ , ಕೊಳಗ ಧಾರಣೆ ಮಾಡಲಾಗುತ್ತದೆ. ಜಯ ಚಾಮರಾಜೇಂದ್ರ ಅರಸು ಪುತ್ರ ಸಂತಾನಕ್ಕೆ ಆಪೇಕ್ಷೆ ಪಟ್ಟು ತ್ರಿನೇಶ್ವರ ಸ್ವಾಮಿನಿಗೆ ಚಿನ್ನದ ಕೊಳಗ ಮಾಡಿಸಿದ್ದಾರೆ. ಕೊಳಗದಲ್ಲಿ ತಾಯಿ ಗಂಗೆಯನ್ನು ಕೂಡ ಕೂರಿಸಲಾಗಿದೆ. ಏಕಾವರ ಅಭಿಷೇಕ, ರಾತ್ರಿ 11 ಗಂಟೆಗೆ ಏಕಾದಶ ವಾರ ವಿಶೇಷ ಪೂಜೆ, ಮಧ್ಯಾಹ್ನ 2.30ಕ್ಕೆ ಮೂರನೇ ಪೂಜೆ , ಸಂಜೆ 3 ರಿಂದ 4 ಗಂಟೆವರೆಗೆ ಕೊನೆಯ ಪೂಜೆ. ಇದರೊಂದಿಗೆ ಶಿವರಾತ್ರಿ ಪೂಜೆ ಅಂತ್ಯವಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.