ಬೆಂಗಳೂರು; ನಟಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿದರು. ಅಣ್ಣಾವ್ರು ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ ಡಾ.ರಾಜ್ಕುಮಾರ್ ಇಂದು ನಮ್ಮೊಂದಿಗಿದ್ದಿದ್ದರೆ ೯೬ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಅಣ್ಣಾವ್ರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದಾರೆ. ನಟನ ಹುಟ್ಟುಹಬ್ಬವನ್ನು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

ರಾಜ್ ಸಮಾಧಿ, ಸ್ಮಾರಕಕ್ಕೆ ಪೂಜೆ: ರಾಘವೇಂದ್ರ ರಾಜ್ಕುಮಾರ್, ಪತ್ನಿ ಮಂಗಳಾ, ಅಶ್ವಿನಿ ಪುನೀತ್ ರಾಜ್ಕುಮಾರ್, ಎರಡನೇ ಮಗಳು ವಂದಿತಾ ಸೇರಿದಂತೆ ರಾಜ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸಮಾಧಿ, ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಮತ್ತೊಂದೆಡೆ, ಪತ್ನಿ ಗೀತಾ ಜೊತೆ ಶಿವರಾಜ್ಕುಮಾರ್ ಆಗಮಿಸಿ ನಮನ ಸಲ್ಲಿಸಿದರು. ರಾಜ್ ಹೆಸರಲ್ಲಿ ಸಾಮಾಜಿಕ ಕಾರ್ಯಗಳನ್ನು ನೆಡೆಸಲಾಗುತ್ತಿದೆ. ಪ್ರತೀ ವರ್ಷ ರಾಜ್ ಅಭಿಮಾನಿಗಳು ಅನ್ನದಾನ, ರಕ್ತದಾನ ಮಾಡುವ ಮೂಲಕ ರಾಜ್ ಜನ್ಮದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅದರಂತೆ ಇಂದು ವಿವಿಧೆಡೆ ಪುಣ್ಯಕಾರ್ಯಗಳು ನಡೆಯುತ್ತಿವೆ.