ನವದೆಹಲಿ: ಪ್ರಯಾಗರಾಜ್ನಲ್ಲಿ ನಡೆದ ಮಹಾಕುಂಭ ಉತ್ಸವದಲ್ಲಿ 30 ಜನರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಇಂದು ಸಂಸತ್ತಿನಲ್ಲಿ ಘೋಷಣೆಗಳನ್ನು ಕೂಗಿದರು. ಕೋಪಗೊಂಡ ವಿಪಕ್ಷಗಳ ಸಂಸದರು ಕುಂಭ ಮೇಳದ ದುರಂತಕ್ಕೆ ಉತ್ತರ ಬೇಕು ಎಂದು ಸದನದ ಬಾವಿಗಿಳಿದು ಘೋಷಣೆ ಕೂಗತೊಡಗಿದರು. ಕಾಲ್ತುಳಿತದಲ್ಲಿ ಮೃತಪಟ್ಟವರನ್ನು ಗುರುತಿಸುವ ಪಟ್ಟಿಯನ್ನು ನೀಡುವಂತೆ ವಿರೋಧ ಪಕ್ಷದ ಸಂಸದರು ಒತ್ತಾಯಿಸಿದರು. ನೀವು 30 ಜನ ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದೀರಿ. ಆದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಈ ಘಟನೆಯ ನಂತರ ಹಲವು ಗಂಟೆಗಳ ಕಾಲ ಸಾವುಗಳನ್ನು ದೃಢೀಕರಿಸಲು ಸಮಯ ತೆಗೆದುಕೊಂಡ ಉತ್ತರ ಪ್ರದೇಶ ಸರ್ಕಾರವು ನಿಜವಾದ ಸಾವಿನ ಸಂಖ್ಯೆಯನ್ನು ಮರೆಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಮಹಾಕುಂಭ ಮೇಳದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂದು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದಾಗ ಲೋಕಸಭೆಯಲ್ಲಿ ಜೋರಾಗಿ ಘೋಷಣೆಗಳು ಕೇಳಿಬಂದವು. “ಭಾರತದ ಜನರು ನಿಮ್ಮನ್ನು ಆಯ್ಕೆ ಮಾಡಿದ್ದು ಸಂಸತ್ತಿನಲ್ಲಿ ಮೇಜು ಒಡೆಯಲು ಅಥವಾ ಘೋಷಣೆಗಳನ್ನು ಕೂಗಲು ಅಲ್ಲ” ಎಂದು ಈ ವೇಳೆ ಲೋಕಸಭೆಯ ಸ್ಪೀಕರ್ ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನಿರಂತರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಲೋಕಸಭೆಯ ಕಲಾಪಕ್ಕೆ ಅಡ್ಡಿಪಡಿಸದಂತೆ ವಿರೋಧ ಪಕ್ಷಗಳ ಬಳಿ ಮನವಿ ಮಾಡಿದರು. “ಸದನವನ್ನು ಅಡ್ಡಿಪಡಿಸದಂತೆ ನಾನು ಪ್ರತಿಪಕ್ಷಗಳನ್ನು ವಿನಂತಿಸುತ್ತೇನೆ” ಎಂದು ಅವರು ಹೇಳಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಹಾಕುಂಭ ಕಾಲ್ತುಳಿತದ ವಿಷಯವನ್ನು ಪ್ರಸ್ತಾಪಿಸುವಂತೆ ಸ್ಪೀಕರ್ ಓಂ ಬಿರ್ಲಾ ನಿರ್ದೇಶನ ನೀಡಿದ್ದರೂ ವಿರೋಧ ಪಕ್ಷವು ಲೋಕಸಭೆಯಲ್ಲಿ ಘೋಷಣೆಗಳನ್ನು ಮುಂದುವರೆಸಿತು.