ಬೆಂಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ರಿಕ್ತ ಪರಿಸ್ಥಿತಿಯ ನಡುವೆ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗುತ್ತದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಜ್ಯದ ಈ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ ನಂತರ ಭಾರತ ನೇರ ರಾಷ್ಟ್ರಕ್ಕೆ ತಕ್ಕ ತಿರುಗೇಟು ನೀಡಿತ್ತು. ಈ ಸಂದರ್ಭದಲ್ಲಿ ಯುದ್ಧ ಸನ್ನಿವೇಶ ತಲೆದೋರಿತ್ತು. ತಮ್ಮನ್ನು ರಕ್ಷಣೆ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಶುಕ್ರವಾರದಂದು ನಾನು ಚನ್ನಪಟ್ಟಣದ ಕಾರ್ಯಕ್ರಮದಲ್ಲಿ ಭಾವಿಯಾಗಿದ್ದೆ. ಆ ಸಂದರ್ಭದಲ್ಲಿ ತಗಚಗೆರೆ ಗ್ರಾಮದ ಜೆಡಿಎಸ್ ಮುಖಂಡರು ಈ ಬಗ್ಗೆ ಮನವಿ ಮಾಡಿದರು. ತಮ್ಮ ಪುತ್ರ ಹರ್ಷಿತ್ ಅವರು ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು, ಯುದ್ಧ ಭೀತಿಯಿಂದ ಅವರನ್ನು ಕರ್ನಾಟಕಕ್ಕೆ ಹಿಂತಿರುಗಿಸಲು ನನ್ನ ಸಹಾಯ ಕೋರಿದರು. ಅಲ್ಲದೆ, ಕರ್ನಾಟಕದ ಇನ್ನೂ ಹಲವಾರು ವಿದ್ಯಾರ್ಥಿಗಳು ಅಲ್ಲಿ ಓದುತ್ತಿರುವ ಮಾಹಿತಿ ಸಿಕ್ಕಿತು.
ಕೂಡಲೇ ನಾನು ಈ ವಿಷಯವನ್ನು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತಂದು, ವಿದ್ಯಾರ್ಥಿಗಳ ರಕ್ಷಣೆಗೆ ನೆರವಾಗುವಂತೆ ಮನವಿ ಮಾಡಿದೆ. ನನ್ನ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು; ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ಮಕ್ಕಳ ರಕ್ಷಣೆಗಾಗಿ ತಮ್ಮ ಸಚಿವಾಲಯದ ಅಧಿಕಾರಿಗಳನ್ನು ನಿಯೋಜಿಸಿದರು. ಈ ಮೂಲಕ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕದ 13 ವಿದ್ಯಾರ್ಥಿಗಳನ್ನು ಮರಳಿ ನಮ್ಮ ನಾಡಿಗೆ ಕರೆತರುವ ವ್ಯವಸ್ಥೆಯನ್ನು ತ್ವರಿತ ಗತಿಯಲ್ಲಿ ಮಾಡಲಾಯಿತು ಎಂದು ನಿಖಿಲ್ ಅವರು ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ಜಮ್ಮುವಿನಿಂದ ಹೊರಟು ರಾತ್ರಿಯ ವೇಳೆಗೆ ನವದೆಹಲಿ ತಲುಪಲಿದ್ದಾರೆ. ಅಲ್ಲಿಂದ ಅವರೆಲ್ಲರನ್ನೂ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಲಾಗಿದೆ ಎಂದಿರುವ ಅವರು; ಕಾಶ್ಮೀರದಿಂದ ಕರ್ನಾಟಕಕ್ಕೇ ಮರಳುತ್ತಿರುವ ವಿದ್ಯಾರ್ಥಿಗಳ ಜೊತೆಯಲ್ಲಿರುವ ಚನ್ನಪಟ್ಟಣ ತಾಲ್ಲೂಕಿನ ವಿದ್ಯಾರ್ಥಿ ಹರ್ಷಿತ್ ಅವರೊಂದಿಗೆ ವಿಡಿಯೋ ಕರೆ ಮಾಡಿ ಎಲ್ಲರ ಯೋಗಕ್ಷೇಮ ವಿಚಾರಿಸಿದೆ. ಈಗ ಎಲ್ಲಾ ವಿದ್ಯಾರ್ಥಿಗಳು ಕಾಶ್ಮೀರಿನಿಂದ ಜಮ್ಮುಗೆ ಪ್ರಯಾಣಿಸುತ್ತಿದ್ದು, ನಂತರ ದಿಲ್ಲಿ ತಲುಪಿ, ಅಲ್ಲಿಂದ ಬೆಂಗಳೂರಿಗೆ ತೆರಳಿದ್ದಾರೆ ಎಂದಿದ್ದಾರೆ.
ಇವರೆಲ್ಲರೂ ಕ್ಷೇಮವಾಗಿ ಪ್ರಯಾಣಿಸುತ್ತಿದ್ದು, ನಾನು ಮತ್ತು ನಮ್ಮ ತಂಡ ಇವರೊಂದಿಗೆ ನಿರಂತರ ಸಂಪರ್ಕಲ್ಲಿದ್ದೇನೆ. ಇವರ ಪೋಷಕರು ಮತ್ತು ಸಂಬಂಧಿಗಳು ಯಾವುದೇ ಆತಂಕಪಡುವ ಅವಶ್ಯಕತೆ ಇರುವುದಿಲ್ಲ. ಇವರನ್ನ ಬೆಂಗಳೂರಿಗೆ ಕರೆತರಲು ಸಹಾಯ ಮಾಡಿದ ಎಲ್ಲಾ ಕೇಂದ್ರ ಸರ್ಕಾರದ ಇಲಾಖೆಯ ಅಧಿಕಾರಿಗಳಿಗೂ ಧನ್ಯವಾದಗಳನ್ನು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.