ಬೆಳಗಾವಿ: ಬಿಜೆಪಿಯವರ ಗೊಡ್ಡು ಬೆದರಿಕೆಗೆ ಕಾಂಗ್ರೆಸಿಗರು ಹೆದರುವುದಿಲ್ಲ. ಇಂಥ ನೂರಾರು ಪ್ರತಿಭಟನೆ, ಬೆದರಿಕೆಗಳನ್ನು ನೋಡಿದ್ದೇವೆ. ಇಂಥ ಘಟನೆ ಬಿಜೆಪಿ ಯವರಿಗೆ ಶೋಭೆ ತರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಸಿಪಿಎಡ್ ಮೈದಾನದಲ್ಲಿ ಸೋಮವಾರ ನಡೆದ ಕೇಂದ್ರ ಸರ್ಕಾರ ವಿರುದ್ಧದ ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತೆಯರು ಕಪ್ಪು ಬಟ್ಟೆ ಪ್ರದರ್ಶಿಸಿದ ಬಗ್ಗೆ ಕಿಡಿ ಕಾರಿದ ಸಚಿವರು, ನಾಡಿನ ಮುಖ್ಯಮಂತ್ರಿಗಳಿಗೆ ಬಿಜೆಪಿಗರು ಅಗೌರವ ತೋರಿದ್ದಾರೆ. ಇದು ಬಿಜೆಪಿಯವರ ಹತಾಶ ಮನೋಭಾವವನ್ನು ತೋರುತ್ತದೆ ಎಂದರು.
ಬಿಜೆಪಿಯವರಿಗೆ ಧೈರ್ಯವಿದ್ದರೆ ಎದುರಿಗೆ ಬಂದು ಪ್ರತಿಭಟಿಸಬಹುದಿತ್ತು. ಆ ಧೈರ್ಯ ಅವರಿಗಿಲ್ಲ. ಬೆಲೆ ಏರಿಕೆ ಯಾರಿಂದ ಆಗಿದೆ ಅನ್ನೋದು ಜನರಿಗೂ ಗೊತ್ತು. ಇಂಥ ಸಮಾರಂಭದಲ್ಲಿ ಹೀಗೆ ಮಾಡುವುದು ಸರಿಯಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದರು.
ನಮಗೂ ಪ್ರತಿಭಟಿಸಲು ಬರುತ್ತದೆ. ಬಿಜೆಪಿಯವರು ಆಯೋಜಿಸುವ ಸಮಾರಂಭಗಳಲ್ಲಿ ಪ್ರತಿಭಟನೆ, ಗಲಾಟೆ ಮಾಡಬಹುದು. ಬೀದಿ ಬೀದಿಗಳಲ್ಲಿ ಪ್ರತಿಭಟಿಸಬಹುದು. ನಮಗೂ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳಿದ್ದಾರೆ ಎಂದು ಹೇಳಿದರು.
ಇದೇ ರೀತಿ ಮುಂದುವರಿಸಿದರೆ, ನಾವು ಏನು ಮಾಡಬೇಕೆಂದು ಯೋಚಿಸಬೇಕಾಗುತ್ತದೆ. ನಮ್ಮ ರಾಜ್ಯಾಧ್ಯಕ್ಷರು ಈಗಾಗಲೇ ಎಚ್ಚರಿಕೆಯ ಜೊತೆಗೆ ಮನವಿಯನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ. ಇಂಥ ಪ್ರತಿಭಟನೆಗಳನ್ನು ಸಿಎಂ, ಡಿಸಿಎಂ, ನಾವುಗಳು ನೋಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.