ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ವ್ಯಕ್ತಿಯ ಪತ್ನಿ ಮಾತ್ರವಲ್ಲದೆ ವಯಸ್ಕರಾಗಿರುವ ವಾರಸುದಾರ ಪುತ್ರರೂ ಸಹ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ವಯಸ್ಕರಾಗಿದ್ದಾರೆ ಎಂಬ ಕಾರಣ ನೀಡಿ ಮೃತರ ಮಕ್ಕಳಿಗೆ ಪರಿಹಾರ ನೀಡುವುದಕ್ಕೆ ನಿರಾಕರಿಸಿದ್ದ ನ್ಯಾಯಾಧೀಕರಣದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ. ಎಂ. ಜೋಷಿ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಅಪಘಾತ ಘಟನೆಗಳಲ್ಲಿ ಮೃತಪಟ್ಟ ವ್ಯಕ್ತಿಯ ಬಳಿಕ ಅವರ ಕುಟುಂಬದಲ್ಲಿ ಶೂನ್ಯ ಆವರಿಸಿಕೊಂಡಿರುತ್ತದೆ ಎಂದು ಪೀಠ ಹೇಳಿದೆ.
ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ರಸ್ತೆ ಅಪಘಾತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಪರಿಣಾಮ ಇಡೀ ಕುಟುಂಬ ತೊಂದರೆಗೆ ಸಿಲುಕಲಿದೆ. ಆದ್ದರಿಂದ ಎಲ್ಲ ವಾರಸುದಾರರು ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರತ್ತಾರೆ. ಅಲ್ಲದೆ, ವಿವಾಹಿತ ಹೆಣ್ಣು ಮಕ್ಕಳೂ ಸಹ ಮೋಟಾರು ವಾಹನ ಕಾಯ್ದೆಯಡಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ಈ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ ಇಬ್ಬರೂ ಪುತ್ರರು ಪರಿಹಾರಕ್ಕೆ ಅರ್ಹರು ಎಂದು ಪೀಠ ಆದೇಶಿಸಿದೆ.
ಅಲ್ಲದೆ, ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಭಾಷ್ ಎಂಬುವರ ಪತ್ನಿ ಮತ್ತು ಇಬ್ಬರು ವಯಸ್ಕ ಪುತ್ರರಿಗೆ ತಲಾ 52 ಸಾವಿರ ರೂ.ಗಳ ಪರಿಹಾರ ಪಡೆಯುವುದಕ್ಕೆ ಅರ್ಹರಾಗಿರುತ್ತಾರೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: 2019ರ ಏಪ್ರಿಲ್ 7ರಂದು ಕಲಬುರಗಿಯ ಸುಭಾಷ್ ಎಂಬುವರು ಮೊಮ್ಮಗನೊಂದಿಗೆ ದೇವಸ್ಥಾನಕ್ಕೆ ತೆರಳಿ ಹಿಂದಿರುಗುವಾಗ ಬೈಕ್ ಮತ್ತು ಕಾರಿನ ನಡುವೆ ಅಫಘಾತ ನಡೆದಿತ್ತು. ಈ ಘಟನೆಯಲ್ಲಿ ಸುಭಾಷ್ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬAಧಿಸಿದAತೆ ವಿಚಾರಣೆ ನಡೆಸಿದ್ದ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ, ಮೃತರ ಪತ್ನಿಗೆ 10.30 ಲಕ್ಷ ರೂ.ಗಳನ್ನು ಪರಿಹಾರ ನೀಡಿತ್ತು. ಆದರೆ, ಇಬ್ಬರೂ ಪುತ್ರರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇಬ್ಬರೂ ಅರ್ಥಿಕವಾಗಿ ಸ್ವತಂತ್ರರಾಗಿದ್ದಾರೆ, ಹೀಗಾಗಿ ಅವರನ್ನು ಅವಲಂಬಿತರು ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಧೀಕರಣ ತಿಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೃತರ ಮಾಸಿಕ ಆದಾಯ 15 ಸಾವಿರ ರೂ.ಗಳಿತ್ತು. ನ್ಯಾಯಾಧೀಕರಣ ಈ ಅಂಶವನ್ನು ಪರಿಗಣಿಸಿಲ್ಲ. ಆದ್ದರಿಂದ ಮೃತರ ಆದಾಯವನ್ನು ಪರಿಗಣಿಸಿ ಪರಿಹಾರಕ್ಕೆ ಆದೇಶ ನೀಡಬೇಕು. ಜೊತೆಗೆ, ಪುತ್ರರಿಗೂ ಪರಿಹಾರ ನೀಡಬೇಕು ಎಂದು ವಾದ ಮಂಡಿಸಿದ್ದರು.