ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ, ಭಾರತೀಯ ಸೇನೆಯು ಬುಧವಾರ ಮುಂಜಾನೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಭಾರತದ ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ’ ಎಂದು ಹೆಸರಿಸಲಾಗಿದೆ. ಈ ಹೆಸರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆಯ್ಕೆ ಮಾಡಿದ್ಧಾರೆ.

ಆಪರೇಷನ್ಗೆ ‘ಸಿಂಧೂರ’ ಹೆಸರೇಕೆ?: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಅನೇಕ ಮಹಿಳೆಯರು ತಮ್ಮ ಸಂಗಾತಿಗಳನ್ನು ಕಳೆದುಕೊಂಡರು. ಈ ಮಹಿಳೆಯರ ನೋವು ಮತ್ತು ತ್ಯಾಗವನ್ನು ಗೌರವಿಸಲು, ಈ ಪ್ರತೀಕಾರದ ಕ್ರಮಕ್ಕೆ ‘ಆಪರೇಷನ್ ಸಿಂಧೂರ’ ಎಂದು ನಾಮಕರಣ ಮಾಡಲಾಗಿದೆ.
‘ಆಪರೇಷನ್ ಸಿಂಧೂರ’ದ ಉದ್ದೇಶವೇನು?: ಭಾರತದ ಈ ವೈಮಾನಿಕ ದಾಳಿಯ ನಂತರ, ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ‘ಆಪರೇಷನ್ ಸಿಂಧೂರ’ವನ್ನು ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿ ಮಾಡಲಾಗಿದೆ ಎಂದು ಹೇಳಿದೆ. ಈ ದಾಳಿಯು ನೆರೆಯ ದೇಶದೊಂದಿಗೆ ಹೋರಾಡುವ ಗುರಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತ್ ಮಾತಾ ಕಿ ಜೈ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಆಪರೇಷನ್ ಸಿಂಧೂರ ಬಗ್ಗೆ ಪ್ರತಿಕ್ರಿಯಿಸಿ ‘ಭಾರತ್ ಮಾತಾ ಕಿ ಜೈ’ ಎಂದು ಹೇಳಿದ್ದಾರೆ. ರಕ್ಷಣಾ ಸಚಿವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದು ಬರೆದಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ಅವರು, ಜೈ ಹಿಂದ್! ಜೈ ಹಿಂದ್ ಸೇನೆ! ಎಂದು ಪೋಸ್ಟ್ ಮಾಡಿದ್ದಾರೆ.
ಉದ್ವಿಗ್ನತೆ ನಡುವೆ ಸೇನಾ ಕಾರ್ಯಾಚರಣೆ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಭಯೋತ್ಪಾದಕರ ತಾಣಗಳ ಮೇಲೆ ದಾಳಿ ಮಾಡಿದೆ. ಭಾರತ ಸರ್ಕಾರದ ಪ್ರಕಾರ, ಅಲ್ಲಿಂದಲೇ ದೇಶದ ಮೇಲೆ ದಾಳಿಗಳನ್ನು ಯೋಜಿಸಲಾಗುತ್ತಿತ್ತು.