ಬೆಂಗಳೂರು : ಪ್ರಕೃತಿ ನಮಗೆ ನೀಡಿರುವ ಸಕಲ ಸಂಪನ್ಮೂಲದ ಹಿತ -ಮಿತ ಬಳಕೆ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.

ವಿಶ್ವ ಪರಿಸರ ದಿನದ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪರಿಸರ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಪೂರ್ವಜರು ನೈಸರ್ಗಿಕ ಸಂಪನ್ಮೂಲವನ್ನು ಹಿತ-ಮಿತವಾಗಿ ಬಳಸುತ್ತಿದ್ದರು, ಆದರೆ ಇಂದು ನಾವು ಐಷಾರಾಮಿ ಜೀವನಕ್ಕಾಗಿ ಅತಿಯಾಗಿ ಸಂಪನ್ಮೂಲ ಬಳಸುತ್ತಿದ್ದು, ಪರಿಸರ ನಾಶವಾಗುತ್ತಿದೆ ಎಂದರು.
ಇಂದು ಜಗತ್ತಿನ ಮುಂದಿರುವ ದೊಡ್ಡ ಸವಾಲು ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ಆಗಿದೆ. ಇದಕ್ಕೆ ವೃಕ್ಷ, ಅರಣ್ಯ ನಾಶ ಹಾಗೂ ನಮ್ಮ ಜೀವನ ಶೈಲಿಯೇ ಕಾರಣವಾಗಿದೆ. ಪ್ರತಿಯೊಬ್ಬರೂ ವೃಕ್ಷ ನೆಟ್ಟು ಹಸಿರು ಹೊದಿಕೆ ಹೆಚ್ಚಿಸಿದರೆ ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಬಹುದು ಎಂದರು.
ಏಕ ಬಳಕೆ ಪ್ಲಾಸ್ಟಿಕ್ ಬಳಸದಿರಲು ಸಂಕಲ್ಪ ಮಾಡಿ ಮಾಡಬೇಕು. ಏಕ ಬಳಕೆ ಪ್ಲಾಸ್ಟಿಕ್ ನಿಂದ ತಯಾರಿಸಿದ ಉತ್ಪನ್ನಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ರಾಜ್ಯ ಸರ್ಕಾರವೂ ಆದೇಶ ನೀಡಿದೆ. ಆದರೂ ಏಕ ಬಳಕೆ ಪ್ಲಾಸ್ಟಿಕ್ ಹಾವಳಿ ನಿಂತಿಲ್ಲ. ಏಕ ಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ನಾವೆಲ್ಲ ಸಂಕಲ್ಪ ಮಾಡಬೇಕು ಎಂದರು.