ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರವು ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. 2015ರಲ್ಲಿ ಬಿಡುಗಡೆಯಾದ ಈ ಚಿತ್ರವು ದೊಡ್ಡ ಯಶಸ್ಸು ಕಂಡಿತ್ತು. ಈಗ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಕರಾವಳಿ ಪ್ರದೇಶದ ಸಂಸ್ಕೃತಿ ಮತ್ತು ದೈವಾರಾಧನೆಯನ್ನು ಚಿತ್ರಿಸುತ್ತದೆ.

ಅನೂಪ್ ಭಂಡಾರಿ ಅವರು ‘ರಂಗಿತರಂಗ’ ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದರು. ಮೊದಲ ಚಿತ್ರದಲ್ಲೇ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಈ ಚಿತ್ರ ರಿಲೀಸ್ ಆಗಿದ್ದು 2015ರ ಜುಲೈ 3ರಂದು. ಈ ಸಿನಿಮಾ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರಕ್ಕೆ ಸ್ಪರ್ಧೆ ಒಡ್ಡಿತ್ತು. ಈ ಸಿನಿಮಾಗೆ ಈಗ ದಶಕದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಅನೂಪ್ ಭಂಡಾರಿ ಅವರು ಈ ಚಿತ್ರವನ್ನು ರೀ-ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.
ಪ್ರತಿ ಚಿತ್ರವನ್ನು ವಿಶೇಷ ದಿನದಂದು ರೀ-ರಿಲೀಸ್ ಮಾಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗ ‘ರಂಗಿತರಂಗ’ ಕೂಡ ಇದೇ ಪ್ಯಾಟರ್ನ್ ಫಾಲೋ ಮಾಡುತ್ತಿದೆ. ಸಿನಿಮಾಗೆ ದಶಕ ತುಂಬಿದ ಖುಷಿಯಲ್ಲಿ ಜುಲೈ 4ರಂದು ಸಿನಿಮಾ ಮತ್ತೆ ದೊಡ್ಡ ಪರದೆಮೇಲೆ ಬರಲಿದೆ. ಈ ವೇಳೆ ಚಿತ್ರ ಜನರಿಂದ ಮೆಚ್ಚುಗೆ ಪಡೆಯೋ ಸಾಧ್ಯತೆ ಇದೆ.
‘ರಂಗಿತರಂಗ’ ಸಿನಿಮಾದ ಕಥೆ ಕರಾವಳಿಯಲ್ಲಿ ಸಾಗುತ್ತದೆ. ಅಲ್ಲಿನ ಮಂದಿ ಆರಾಧಿಸುವ ದೈವದ ವಿಚಾರವನ್ನು ಇದರಲ್ಲಿ ಹೇಳಲಾಗಿದೆ. ಈ ಸಿನಿಮಾದಲ್ಲಿ ನಿರೂಫ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಸಾಯಿಕುಮಾರ್ ನಟಿಸಿದ್ದಾರೆ. ಅನೂಪ್ ಭಂಡಾರಿ ಸಂಗೀತ ಸಂಯೋಜನೆ ಮಾಡಿದರೆ, ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಒಂದೂವರೆ ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಚಿತ್ರ 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಚಿತ್ರ ‘ಗುಡ್ಡದ ಭೂತ’ ಧಾರಾವಾಹಿಯನ್ನಾಧರಿಸಿದೆ. ಸದ್ಯ ಅನೂಪ್ ಭಂಡಾರಿ ಅವರು ಸುದೀಪ್ ಜೊತೆ ‘ಬಿಲ್ಲ ರಂಗ ಭಾಷ’ ಚಿತ್ರವನ್ನು ಮಾಡುತ್ತಿದ್ದಾರೆ