ಬೆಂಗಳೂರು : ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಗೌರವವನ್ನು ಕೊಡದೇ ಸ್ಪೀಕರ್ ಪೀಠಕ್ಕೆ ಬಂದು ಮುತ್ತಿಗೆ ಹಾಕಿ ಪೇಪರ್ಗಳನ್ನು ಹರಿದು ತೂರಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಟಿ. ಖಾದರ್ ಅವರು 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಮಾ.21ರಂದು ಅಮಾನತುಗೊಂಡ ಶಾಸಕರನ್ನು ಅಧಿವೇಶನ ಕೊಠಡಿಯಿಂದ ಮಾರ್ಷಲ್ಗಳು ಬಲವಂತವಾಗಿ ಎತ್ತಿಕೊಂಡು ಹೋಗಿ ಹೊರಗೆ ಹಾಕಿದ್ದರು.

18 ಬಿಜೆಪಿ ಶಾಸಕರ ಅಮಾನತು ಆದೇಶವನ್ನು ಹಿಂಪಡೆಯುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಸತತವಾಗಿ ಪ್ರಯತ್ನಿಸಿದ್ದರು. ಇನ್ನು ಬಿಜೆಪಿ ನಾಯಕರು ಕೂಡ ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ಪುನಃ ಶಾಸಕರ ಅಮಾನತು ಹಿಂಪಡೆಯುವ ವಿಚಾರದ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಅವರು ಮಹತ್ವದ ಸಭೆಯನ್ನು ಕರೆದಿದ್ದರು
ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯುವ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಿತು. ಸಭೆಯಲ್ಲಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್. ಅಶೋಕ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಭಾಗಿಯಾಗಿದ್ದರು. ಈ ವೇಳೆ ಶಾಸಕರ ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಖಾದರ್ಗೆ ಮನವಿ ಮಾಡಿದ್ದಾರೆ. ಈ ಸಂಧಾನ ಸಭೆಯಲ್ಲಿ ಸಂಧಾನ ಸಭೆಯಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ. ಕೊನೆಗೂ ಸಾಮ್ರಾಟ್ ಆರ್. ಅಶೋಕ್ ಸತತ ಪ್ರಯತ್ನಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ.
ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿ, ಶಾಸಕರ ಅಮಾನತು ಆದೇಶವನ್ನ ಹಿಂಪಡೆಯಲಾಗಿದೆ. ಘಟನೆ ಬಗ್ಗೆ ಎಲ್ಲ ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಕೂಡ ನನಗೆ ಮನವಿ ಸಹ ಸಲ್ಲಿಸಿದರು. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. 18 ಶಾಸಕರನ್ನು ಅಮಾನತು ಮಾಡಿ ಎರಡು ತಿಂಗಳಾಗಿದೆ. ಸಂತೋಷದಿಂದ ಶಾಸಕರ ಅಮಾಮತು ಹಿಂಪಡೆದಿದ್ದೇನೆ. ಯಾವುದೇ ಷರತ್ತು ಇಲ್ಲ, ಎಲ್ಲರೂ ನಮ್ಮ ಮಿತ್ರರು. ಆ ಸಮಯದಲ್ಲಿ ದುರ್ನಡತೆ ತೋರಿದ್ದಕ್ಕೆ ಕ್ರಮಕೈಗೊಂಡೆ. ಕ್ರಮತೆಗೆದುಕೊಳ್ಳುವುದಕ್ಕೆ ನನಗೆ ಅಧಿಕಾರವಿದೆ ಎಂದು ಹೇಳಿದರು.
ಅಮಾನತುಗೊಂಡಿದ್ದ ಶಾಸಕರು :
1. ಅಶ್ವಥ್ ನಾರಾಯಣ, ಮಲ್ಲೇಶ್ವರಂ
2. ಎಸ್.ಆರ್ ವಿಶ್ವನಾಥ್, ಯಲಹಂಕ
3. ಮುನಿರತ್ನ, ಆರ್ ಆರ್ ನಗರ
4. ಬೈರತಿ ಬಸವರಾಜು, ಕೆಆರ್ ಪುರಂ
5. ಸುರೇಶ್ ಗೌಡ, ತುಮಕೂರು ಗ್ರಾ.
6. ಚನ್ನಬಸಪ್ಪ, ಶಿವಮೊಗ್ಗ
7. ಸಿ.ಕೆ. ರಾಮಮೂರ್ತಿ, ಜಯನಗರ
8. ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ
9. ಬಿ.ಪಿ. ಹರೀಶ್, ಹರಿಹರ
10. ಯಶ್ಪಾಲ್ ಸುವರ್ಣ, ಉಡುಪಿ
11. ಭರತ್ ಶೆಟ್ಟಿ, ಮಂಗಳೂರು
12. ಉಮಾನಾಥ್ ಕೋಟ್ಯಾನ್, ಮೂಡುಬಿದರೆ
13. ಎಂ.ಆರ್ ಪಾಟೀಲ್, ಕುಂದಗೋಳ
14. ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ
15. ಶರಣು ಸಲಗಾರ್, ಬಸವಕಲ್ಯಾಣ
16. ಬಸವರಾಜ ಮತ್ತಿಮೂಡ್, ಕಲಬುರಗಿ ಗ್ರಾ.
17. ಚಂದ್ರು ಲಮಾಣಿ, ಶಿರಹಟ್ಟಿ
18. ದೊಡ್ಡನಗೌಡ ಪಾಟೀಲ್, ಕುಷ್ಟಗಿ