ಬೆಂಗಳೂರು : ಕರ್ನಾಟಕ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯ ಪರಿಣಾಮ ವಿವಿಧ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಕರ್ನಾಟಕದ ದೇವಾಲಯಗಳ ಆದಾಯವೂ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ, ಮುಜರಾಯಿ ಇಲಾಖೆಯೇ ಹಲವು ಬಾರಿ ಹೇಳಿಕೆ ನೀಡಿದೆ. ಆದರೆ, ಅಚ್ಚರಿಯ ಸಂಗತಿ ಎಂದರೆ ಉದ್ಯಾನ ನಗರಿ ಬೆಂಗಳೂರಿನ ದೇವಾಲಯಗಳ ಆದಾಯದಲ್ಲಿ ಕುಸಿತ ಕಂಡುಬಂದಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಇಲಾಖೆಯು ರಾಜ್ಯದ ದೇವಾಲಯಗಳ ನಿರ್ವಹಣೆ ನೋಡಿಕೊಳ್ಳುತ್ತದೆ. ದೇವಾಲಯಗಳ ಆದಾಯದ ಆಧಾರದ ಮೇಲೆ ಮುಜರಾಯಿ ಇಲಾಖೆ ಅವುಗಳನ್ನು ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿದೆ. ಬೆಂಗಳೂರು ನಗರದ ಪ್ರಸಿದ್ಧ 21 ದೇವಾಲಯಗಳನ್ನು ಎ, ಬಿ ಮತ್ತು ಸಿ ವಿಭಾಗಕ್ಕೆ ಸೇರಿಸಲಾಗಿದೆ. ಇವುಗಳಲ್ಲಿ 16 ದೇವಾಲಯಗಳ ಆದಾಯದಲ್ಲಿ ಕುಸಿತ ಕಂಡುಬಂದಿದೆ.
ನಗರದ ಪುರಾತನ ಬನಶಂಕರಿ ದೇವಾಲಯ, ಹಲಸೂರಿನ ಸೋಮೇಶ್ವರ ದೇವಾಲಯ ಸೇರಿ ನಗರದ 5 ದೇವಾಲಯಗಳ ಆದಾಯದಲ್ಲಿ ಮಾತ್ರ ಕೊಂಚ ಏರಿಕೆ ಕಂಡುಬಂದಿದೆ. 2024-25ನೇ ಸಾಲಿನ ದೇವಾಲಯದ ಆದಾಯದ ಆಡಿಟ್ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕುಕ್ಕೆ ಸುಬ್ರಮಣ್ಯ ದೇವಾಲಯದ ವಾರ್ಷಿಕ ಆದಾಯ 155.59 ಕೋಟಿ ರೂ. ಆಗಿದ್ದು, ಇದು ರಾಜ್ಯದ ಶ್ರೀಮಂತ ದೇವಾಲಯ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ‘ಎ’ ವಿಭಾಗದಡಿ 205 ದೇವಾಲಯಗಳಿದ್ದು, ವಾರ್ಷಿಕ 25 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿವೆ. 2024ರಲ್ಲಿ ಈ ದೇವಾಲಯಗಳು 743 ಕೋಟಿ, 2023ರಲ್ಲಿ 675 ಕೋಟಿ ರೂ. ಆದಾಯವನ್ನು ತಂದುಕೊಟ್ಟಿವೆ. 5 ರಿಂದ 25 ಲಕ್ಷದ ತನಕ ಆದಾಯ ಇರುವ ದೇವಾಲಯಗಳು ‘ಬಿ’ ವಿಭಾಗಕ್ಕೆ ಸೇರುತ್ತವೆ. 2024ರಲ್ಲಿ ಈ ದೇವಾಲಯಗಳು 34.8 ಕೋಟಿ, 2023ರಲ್ಲಿ 33.3 ಕೋಟಿ ರೂ. ಆದಾಯವನ್ನು ತಂದುಕೊಟ್ಟಿವೆ. ಆದರೆ ಬೆಂಗಳೂರು ನಗರದ ದೇವಾಲಯಗಳ ಆದಾಯ ಕುಸಿತ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ.
ಬೆಂಗಳೂರು ನಗರದ ದೇವಾಲಯಗಳ ಆದಾಯ: ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯದ ಆದಾಯ 54.1 ಲಕ್ಷದಿಂದ 36.7 ಲಕ್ಷಕ್ಕೆ ಕುಸಿದಿದೆ. ಗವಿಗಂಗಾಧರೇಶ್ವರ ದೇವಾಲಯದ ಆದಾಯ 92 ಲಕ್ಷದಿಂದ 84.9 ಲಕ್ಷಕ್ಕೆ ಇಳಿಕೆಯಾಗಿದೆ. ಬಾಣಸವಾಡಿ ಆಂಜನೇಯ ಸ್ವಾಮಿ ದೇವಾಲಯದ ಆದಾಯ 89 ಲಕ್ಷದಿಂದ 69.7 ಲಕ್ಷಕ್ಕೆ ಇಳಿಕೆಯಾಗಿದೆ. ಮಲ್ಲೇಶ್ವರದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಆದಾಯ 59 ಲಕ್ಷದಿಂದ 48.3 ಲಕ್ಷಕ್ಕೆ ಇಳಿಕೆಯಾಗಿದೆ. ವಸಂತಪುರದ ವಸಂತ ವಲ್ಲಭರಾಯ ದೇವಾಲಯದ ಆದಾಯ 67.9 ರಿಂದ 65.6 ಲಕ್ಷಕ್ಕೆ ಕುಸಿದಿದೆ. ಬೆಂಗಳೂರು ನಗರದ ದೇವಾಲಯಗಳ ಆದಾಯ ಕುಸಿತದ ಕುರಿತು ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಾಜ್ಯದ ದೇವಾಲಯಗಳ ಆದಾಯ ಹೆಚ್ಚಳವಾಗುತ್ತಿದೆ. ಆದರೆ ನಗರದ ದೇವಾಲಯಗಳ ಆದಾಯ ಕುಸಿತ ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.
“ದೇವಾಲಯದ ಆಡಳಿತ ಮಂಡಳಿ ಜೊತೆ ಈ ಕುರಿತು ಮುಂದಿನ ಪರಿಶೀಲನಾ ಸಭೆಯಲ್ಲಿ ಚರ್ಚೆ ಮಾಡುತ್ತೇನೆ. ನನ್ನ ಪ್ರಕಾರ ಜನರು ರಾಜ್ಯದ ವಿವಿಧ ದೇವಾಲಯಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ನಗರದ ದೇವಾಲಯದ ಆದಾಯ ಕುಸಿತವಾಗಿರಬಹುದು” ಎಂದು ತಿಳಿಸಿದ್ದಾರೆ. “ಶಕ್ತಿ ಯೋಜನೆ ಜಾರಿಗೆ ಬರುವ ಮೊದಲು ಜನರು ಆರ್ಥಿಕ ಕಾರಣಕ್ಕೆ ದೂರದ ದೇವಾಲಯಕ್ಕೆ ಭೇಟಿ ನೀಡುತ್ತಿರಲಿಲ್ಲ. ತಮ್ಮ ಹತ್ತಿರದ ದೇವಾಲಯಕ್ಕೆ ಹೋಗುತ್ತಿದ್ದರು. ಆದರೆ ಶಕ್ತಿ ಯೋಜನೆ ಬಳಿಕ ಅವರು ಬೇರೆ ದೇವಾಲಯಕ್ಕೆ ತೆರಳಲು ಅನುಕೂಲವಾಗಿದೆ. ಆದ್ದರಿಂದ ಅವರು ಕುಕ್ಕೆ ಸುಬ್ರಮಣ್ಯ, ಕಟೀಲು, ರೇಣುಕಾದೇವಿ ಮುಂತಾದ ದೇವಾಲಯಕ್ಕೆ ತೆರಳುತ್ತಿದ್ದಾರೆ” ಎಂದು ಸಚಿವ ರಾಮಲಿಂಗಾ ರೆಡ್ಡಿ ವಿವರಣೆ ನೀಡಿದ್ದಾರೆ.