ಬೆಂಗಳೂರು: ಕರ್ನಾಟಕ ಸರ್ಕಾರಿ ಸೌಲಭ್ಯಗಳು ಪರಿಪೂರ್ಣವಾಗಿ ಸ್ಥಳೀಯ ವಿಶೇಷಚೇತನರಿಗೆ ಸಿಗುತ್ತಿಲ್ಲ. ಅಗತ್ಯ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದಾರೆ. ವಿಶೇಷ ಚೇತನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಅವರಿಗೆ ನೇರ ತಲುಪುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ, ಜನಸಾಮಾನ್ಯರು ವಿಶೇಷ ಚೇತನರೊಂದಿಗೆ ಸಂವಹಿಸುವಾಗ ಸೂಕ್ಷ್ಮತೆ ಹೊಂದಿರಬೇಕು ಎಂದು ಹೃದಯತಜ್ಞ ಡಾ. ವಿವೇಕ್ ಜವಳಿ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಬುಧವಾರ ಅಸ್ಥಾ ಹಾಗೂ ಅಂಗವಿಕಲರಿಗಾಗಿ ಉದ್ಯೋಗ ಉತ್ತೇಜನ ರಾಷ್ಟ್ರೀಯ ಕೇಂದ್ರ (NCPEDP) ಸಹಯೋಗದಲ್ಲಿ ನಡೆಸಿದ “ವಿಶೇಷ ಚೇತನರ ಆರೋಗ್ಯ ಸ್ಥಿತಿ-ಗತಿಗಳ” ಸಮೀಕ್ಷಾ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ವಿಕಲಚೇತನರಿಗೂ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿದೆ. ಆದರೆ, ಅವರಿಗಾಗಿಯೇ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಅವರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆಯೂ ಗಮನಹರಿಸಬೇಕು ಎಂದರು. ವಿಕಲಚೇತನರೊಂದಿಗೆ ಮಾತನಾಡುವಾಗ ಪ್ರತಿಯೊಬ್ಬರು ಒಂದಷ್ಟು ಸೂಕ್ಷ್ಮತೆಯ ಮನೋಭಾವ ಹೊಂದಿರಬೇಕು, ಆಗ ಮಾತ್ರ ಅವರ ಭಾವನೆಗಳಿಗೆ ದಕ್ಕೆಯಾಗದಂತೆ ಸಂವಹನ ನಡೆಸಲು ಸಾಧ್ಯ. ಅಸ್ಥಾ ಹಾಗೂ ಎನ್ಸಿಪಿಇಡಿಪಿ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿರುವುದು ಶ್ಲಾಘನೀಯ. ಇಂತಹ ವರದಿಗಳಿಂದಾದರೂ ವಿಶೇಷ ಚೇತನರ ಆರೋಗ್ಯದ ಬಗ್ಗೆ ಪ್ರತಿಯೊಬ್ಬರ ಗಮನಸೆಳೆಯಲು ಸಾಧ್ಯ ಎಂದು ಹೇಳಿದರು. ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿಶೇಷ ಚೇತನರು ಎನ್ಸಿಪಿಇಡಿಪಿ ಕಾರ್ಯನಿರ್ವಹಕ ನಿರ್ದೇಶಕ ಅರ್ಮಾನ್ ಅಲಿ, ನಮ್ಮ ದೇಶದಲ್ಲಿ ವಿಕಲಚೇತರನ್ನು ನಿರ್ಲಕ್ಷ್ಯ ಮಾಡಿದಷ್ಟು ಎಲ್ಲಿಯೂ ಮಾಡಲಾಗುತ್ತಿಲ್ಲ. ಜನಸಾಮಾನ್ಯರು ಸಹ ವಿಕಲಚೇತನರನ್ನು ಅನಾರೋಗ್ಯ ಪೀಡಿತ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದಾರೆ. ಈ ಮನೋಭಾವ ಬದಲಾಗಬೇಕು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ಮಹಿಳೆಯರು, ಹಿರಿಯನಾಗರಿಕರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಆದರೆ, ವಿಶೇಷಚೇತನರಿಗೆ ಯಾವುದೇ ವಿಶೇಷ ಸಲವತ್ತು ಇಲ್ಲ.
ಭಾರತದಲ್ಲಿ ವಿಶೇಷ ಚೇತನರು ಓಡಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ವೀಲ್ಚೇರ್ ಸಾಗಲು ಸೂಕ್ತ ಮಾರ್ಗಗಳೇ ಇಲ್ಲ. ಈ ಬಗ್ಗೆ ಸರ್ಕಾರ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ? ನಮ್ಮನ್ನೂ ಎಲ್ಲರಂತೆಯೇ ನೋಡಿ, ನಮಗೆ ನೀಡಬೇಕಾದ ಮೂಲಸೌಕರ್ಯಗಳನ್ನು ನಮ್ಮ ಹಕ್ಕೆಂದು ನೀಡಿ ಎಂದು ಆಗ್ರಹಿಸಿದರು. ಬಿಡುಗಡೆಯಾದ ವರದಿ ಪ್ರಮುಖ ಅಂಶಗಳು ಪ್ರಸ್ತುತ ಸಂಶೋಧನೆಯು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಾದ್ಯಂತ ವ್ಯಕ್ತಿಗಳನ್ನು ಸಮೀಕ್ಷೆ ಮಾಡಿದೆ. 2024-25ರಲ್ಲಿ ಹನ್ನೆರಡು ತಿಂಗಳ ಅವಧಿಯಲ್ಲಿ ನಡೆದ ಈ ಅಧ್ಯಯನವು, ಅಂಗವಿಕಲರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಗ್ರವಾಗಿ ಒಳಗೊಂಡಿದೆ. ಅಂಗವಿಕಲರ ಮುಖ್ಯ ಆಯುಕ್ತರ ಕಚೇರಿ (CCPD) ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ (DDWO) ಸಮೀಕ್ಷೆಗೆ ಸಹಕಾರ ಲಭ್ಯವಾಗಿದೆ.
ಒಟ್ಟಾರೆ, 758 ವಿಕಲಚೇತನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಶೇಕಡಾ 70 ರಿಂದ ಶೇಕಡಾ 96 ರಷ್ಟು ಅಂಗವಿಕಲ ವ್ಯಕ್ತಿಗಳಿಗೆ ಮೂಲಭೂತ ಆರೋಗ್ಯ ವಿಮೆಯೇ ದೊರೆತಿಲ್ಲ. * ಬಹುತೇಕ ವಿಕಲಚೇತನರು ನಿರುದ್ಯೋಗಿಗಳಾಗಿದ್ದಾರೆ. ಜೀವನೋಪಾಯಕ್ಕಾಗಿ ತಮ್ಮ ಕುಟುಂಬಗಳ ಮೇಲೆ ಅವಲಂಬಿತರಾಗಿದ್ದಾರೆ. * ಶೇಕಡಾ 95 ರಷ್ಟು ವಿಕಲಚೇತನರ ಮನೆಯ ಆದಾಯವು ವರ್ಷಕ್ಕೆ 1 ಲಕ್ಷಕ್ಕಿಂತ ಕಡಿಮೆ ಇದೆ. ಈಗಾಗಲೇ ದುರ್ಬಲರಾಗಿರುವ ಈ ಜನಸಂಖ್ಯೆಯ ಅರ್ಧದಷ್ಟು ಜನರು ಕರ್ನಾಟಕದಲ್ಲಿ ತಮ್ಮ ಅಲ್ಪ ಮೊತ್ತದ 2000 ಮಾಸಿಕ ಪಿಂಚಣಿಯ ಕಾಲು ಭಾಗವನ್ನು ಮಾಸಿಕ ಆರೋಗ್ಯ ವೆಚ್ಚಗಳಿಗಾಗಿ ಖರ್ಚು ಮಾಡುತ್ತಾರೆ. * ಗಮನಾರ್ಹ ಸಂಖ್ಯೆಯ ವಿಶೇಷ ಚೇತನರು ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಹೊಂದಿಲ್ಲ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. * ಸುಮಾರು 90% ವ್ಯಕ್ತಿಗಳು ಯಾವುದೇ ಸಹಾಯಕ ಸಾಧನಗಳನ್ನು ಬಳಸುತ್ತಿಲ್ಲ ಮತ್ತು ಆರೋಗ್ಯ ರಕ್ಷಣೆ ಅಥವಾ ವಿಮೆಗೆ ಹೊಂದಿಲ್ಲ. * ಆರೋಗ್ಯ ಸೇವೆ ಸ್ಥಿತಿ ಮತ್ತು ಸೇವೆಗಳಲ್ಲಿನ ಅಂತರವನ್ನು ನಿವಾರಿಸಲು ಮತ್ತು ಅಂಗವಿಕಲರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿಮಾ ಯೋಜನೆಗಳು ಮತ್ತು ಮೂಲಸೌಕರ್ಯ ವಿನ್ಯಾಸಗೊಳಿಸುವುದು ಅನಿವಾರ್ಯ.