ಮಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲೊಂದು ಸುಂದರ ಜಲಪಾತವಿದೆ. ಅದರ ಹೆಸರೇ ಮಗಜಹಳ್ಳಿ (ಅಬ್ಬಿ ಜಲಪಾತ)
ಅಬ್ಬಿ ಜಲಪಾತ ಮೈದುಂಬಿ ಹರಿಯುತ್ತಿರುವ ದೃಶ್ಯನ್ನು ಕಣ್ತುಂಬಿಕೊಳ್ಳಲು ನೂರಾರು ಕಿ.ಮೀ. ದೂರದಿಂದ ಪ್ರವಾಸಿಗರ ದಂಡೇ ಹರಿದುಬರುತ್ತದೆ. ನಿಸರ್ಗದ ಮೌನವನ್ನೆಲ್ಲ ಆಚೆಗೆ ನೂಕಿ ಆರ್ಭಟಿಸಿ ರುದ್ರನರ್ತನ ಗೈಯ್ಯುವ ಜಲಧಾರೆಯ ಸೊಬಗು ನೋಡಿ ಖುಷಿ ಪಡುತ್ತಾರೆ. ಹಾಗಾದರೆ, ಇಷ್ಟರ ಮಟ್ಟಿಗೆ ಪ್ರವಾಸಿಗರನ್ನು ಆಯಸ್ಕಾಂತದಂತೆ ಸೆಳೆಯುವ ಆ ಜಲಪಾತದ ಬಗ್ಗೆ ತಿಳಿಯೋಣ ಬನ್ನಿ…
ನಾವು ಕುಟುಂಬ ಸಮೇತ ರೈಲಿನಲ್ಲಿ ಸಕಲೇಶಪುರಕ್ಕೆ ಹೋಗಿದ್ವಿ, ಮಂಗಳೂರಿನಿಂದ ಸಕಲೇಶಪುರ ರೈಲಿನಲ್ಲಿ ಹೋಗುವ ಮಜಾನೇ ಬೇರೆ. ಸುತ್ತಲೂ ಪಶ್ಚಿಮ ಘಟ್ಟದಿಂದ ಅವರಿಸಿರುವ ರೈಲು ಮಾರ್ಗ ಪ್ರಕೃತಿಯ ಮುಂದೆ ನಾವು ಎಷ್ಟು ಚಿಕ್ಕವರು ಎಂದು ಅರ್ಥ ಮಾಡಿಸುತ್ತೆ.. ಅಲ್ಲಿನ ಪ್ರಕೃತಿ ಪ್ರತಿಯೊಬ್ಬರ ಮನಸ್ಸೂರೆಗೊಳ್ಳುತ್ತದೆ. ಹೀಗೆ ಪ್ರಯಾಣ ಬೆಳಸಿ ಮಂಜರಾಬಾದ್ ಕೋಟೆ, ಬಿಸ್ಲೆ ವ್ಯೂ ಪಾಯಿಂಟ್ ಮಗಜನಹಳ್ಳಿ ‘ಅಬ್ಬಿ’ ಜಲಪಾತಕ್ಕೂ ಭೇಟಿ ನೀಡಿದ್ದೆವು. ಕಳೆದ ನಾಲ್ಕೈದು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಚಿಟಿ ಚಿಟಿ ಮಳೆ, ಚುಮು ಚುಮು ಚಳಿ ಬೇರೆಯೇ ಆನಂದ ನೀಡಿತ್ತು.