ತುಮಕೂರು: ಅಕ್ರಮ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ, ಆರು ಮಂದಿ ಬಂಧನ

ತುಮಕೂರು: ಅಕ್ರಮ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ, ಆರು ಮಂದಿ ಬಂಧನ

ತುಮಕೂರು: ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ತುಮಕೂರು ಜಿಲ್ಲಾ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧುಚಂದ್ರ, ಶಿವಕುಮಾರ್, ಮಂಜುನಾಥ, ತಿಮ್ಮರಾಜ, ರವೀಶ್, ಇಮ್ರಾನ್ ಪಾಷ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಆಗಸ್ಟ್ 12ರಂದು ಗುಬ್ಬಿ ತಾಲೂಕಿನ ತಿಪೂರು ಗ್ರಾಮದ ಆರೋಪಿ ಮಧುಚಂದ್ರ ಎಂಬಾತ ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ನಾಡ ಬಂದೂಕಿನೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದನು. ಇದನ್ನು ಆಕ್ಷೇಪಿಸಿದ ದರ್ಶನ್ ಎಂಬುವರ ಜೊತೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದೂಕು ಕೆಳಗೆ ಬಿದ್ದು ಸ್ಥಳದಲ್ಲಿಯೇ ಇದ್ದ ಚೈತ್ರ ಎಂಬುವರಿಗೆ ಗಾಯವಾಗಿತ್ತು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಆರೋಪಿ ಹೊಂದಿದ್ದ ಲೈಸೆನ್ಸ್ ಇಲ್ಲದ ಬಂದೂಕಿನ ಬಗ್ಗೆ ತನಿಖೆ ನಡೆಸಿದಾಗ ಜಿಲ್ಲೆಯಲ್ಲಿ ನಾಡ ಬಂದೂಕುಗಳನ್ನು ತಯಾರಿಸಿ 25,000 ರಿಂದ 30,000 ರೂ. ಗಳಿಗೆ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ. ಬಂಧಿತ ಆರು ಮಂದಿ ಆರೋಪಿಗಳಿಂದ ಒಟ್ಟು ನಾಲ್ಕು ಬಂದೂಕುಗಳನ್ನು, ಬಿಡಿ ಭಾಗಗಳನ್ನು ಹಾಗೂ ಇದಕ್ಕೆ ತಯಾರಿಸಲು ಬಳಸಲಾಗಿದ್ದ ಕಚ್ಚಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಈ ರೀತಿ ನಾಡ ಬಂದೂಕುಗಳನ್ನು ಖರೀದಿ ಮಾಡಿರುವವರು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇದಲ್ಲದೆ ಅನೇಕರ ಬಳಿ ಅಕ್ರಮವಾಗಿ ನಾಡ ಬಂದೂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆಯುವ ಕಾರ್ಯದಲ್ಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *