ತುಮಕೂರು || ಮಾರುಕಟ್ಟೆ ಉಳಿವಿಗಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೊರೆ ಹೋದ ಹಿಂದೂಪರ ಸಂಘಟನೆಗಳು

ತುಮಕೂರು || ಮಾರುಕಟ್ಟೆ ಉಳಿವಿಗಾಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೊರೆ ಹೋದ ಹಿಂದೂಪರ ಸಂಘಟನೆಗಳು

ತುಮಕೂರು : ಶ್ರೀ ಸಿದ್ಧಿ ವಿನಾಯಕ ಮಂದಿರ ಮತ್ತು ಉದ್ಯಾನವನ ಜಾಗದಲ್ಲಿ ಮಾಲ್ ನಿರ್ಮಾಣದ ಯೋಜನೆಯನ್ನು ರದ್ದುಗೊಳಿಸಿ ಸಾರ್ವಜನಿಕ ಉದ್ಯಾನವನ ಮತ್ತು ದೇವಸ್ಥಾನ ಸಂರಕ್ಷಿಸುವ ಕುರಿತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಮೂಲಕ ಹಿಂದೂಪರ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು.  

1950 ರಲ್ಲಿ ತುಮಕೂರು ಟೌನ್ ಮುನ್ಸಿಫಲ್ ಹೊಸ ಮಂಡಿಪೇಟೆ ಲೇಔಟ್ನಲ್ಲಿ ಒಂದು ಎಕರೆ ಜಾಗವನ್ನು ಸಾರ್ವಜನಿಕ ಉದ್ಯಾನವನ್ನಾಗಿ ಮಾಡಲಾಗಿತ್ತು.  1960 ರಲ್ಲಿ ಸದರಿ ಜಾಗವನ್ನು ಆರ್.ಎಂ.ಸಿ. ಯವರಿಗೆ ತರಕಾರಿ ಮಾರುಕಟ್ಟೆ ಮಾಡಲು ಮಾರಾಟ ಮಾಡಿತ್ತಾದರೂ ಯಾವುದೇ ಶಾಶ್ವತ ಕಟ್ಟಡ ನಿರ್ಮಿಸದೆ ಉದ್ಯಾನವನದ ಒಂದು ನಿರ್ಧಿಷ್ಟ ಭಾಗದಲ್ಲಿ ಹೂವು ತರಕಾರಿ ವಹಿವಾಟು ಮಾಡಿಕೊಂಡಿದ್ದರು. ಹೀಗಿರುವಾಗ 2021 ರಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸದರಿ ಸಾರ್ವಜನಿಕ ಉದ್ಯಾನದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಮತ್ತು ಮಾಲ್ ಕಟ್ಟಲು ಉದ್ಯಾನವನದಲ್ಲಿರುವ ಮರಗಳನ್ನು ಕಡಿದಿರುವುದಲ್ಲದೆ ಉದ್ಯಾನವನದಲ್ಲಿರುವ ಮಂದಿರವನ್ನು ಕೆಡವಲು ಸರ್ಕಾರ ಮುಂದಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ತೀವ್ರ ವಿರೋಧದಿಂದ ಸದರಿ ಯೋಜನೆಯನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲಾಯಿತು.

ಕಾನೂನಿನ ಪ್ರಕಾರ ಸಾರ್ವಜನಿಕ ಉದ್ಯಾನವೆಂದು ಒಮ್ಮೆ ಘೋಷಿಸಿದಾಗ ಆ ಪ್ರದೇಶವನ್ನು ಬೇರಾವುದೇ ಉದ್ದೇಶಗಳಿಗೆ ಬಳಸತಕ್ಕದ್ದಲ್ಲ ಮತ್ತು ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತಿಲ್ಲ. ಹೀಗಾಗಿ ಉದ್ಯಾನವನದಲ್ಲಿ ಮಾಲ್ ಕಟ್ಟುವ ಯೋಜನೆ ಸಂವಿಧಾನ ಬಾಹಿರವಾಗಿರುತ್ತದೆ. ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿ ಬಹುದೊಡ್ಡ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ಆದ್ದರಿಂದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಆಗಿರುವ ಭ್ರಷ್ಟಾಚಾರವನ್ನು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಿ ಯೋಜನೆಯನ್ನು ರದ್ದುಪಡಿಸಿ ಸಾರ್ವಜನಿಕ ಉದ್ಯಾನವನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿಕೊಡಬೇಕೆಂದು ಹಿಂದೂಪರ ಸಂಘಟನೆಗಳ ಒಕ್ಕೂಟ ಮನವಿಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *