ಚನ್ನಬಸವ.ಎಂ ಕಿಟ್ಟದಾಳ್ .
ತುಮಕೂರು : ನಗರದ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಶ್ರೀಗಳಗಳ ಪ್ರತಿಮೆ ಪ್ರತಿಷ್ಠಾಪನೆ ಮಾಡ ಬೇಕೆಂದು ಸಾರ್ವಜನಿಕರ ಒತ್ತಾಯಗಳು ಹೆಚ್ಚಾಗಿವೆ.

ಹೌದು ಈಗಾಗಲೆ ಕಳೆದ 2020 ಜೂನ್ 8 ರಂದು ಶಿವಕುಮಾರ ಸ್ವಾಮೀಜಿಯ ವೃತ್ತದಲ್ಲಿ ಸ್ವಾಮೀಜಿಯವರ ಪ್ರತಿಮೆ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗಿನ ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಮತ್ತು ಸಿದ್ದಲಿಂಗ ಶ್ರೀಗಳ ನೇತೃತ್ವದಲ್ಲಿ ಸಾರ್ವಜನಿಕರ ಸಹಯೋಗದಲ್ಲಿ ಶಂಕುಸ್ಥಾಪನೆ, ಭೂಮಿ ಪೂಜೆ ನೆರವೇರಿತ್ತು. ಆದರೆ ಕಳೆದ 5 ದಶಕಗಳಿಂದಲೂ ಕೂಡ ಯಾವರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಸ್ವಾಮೀಜಿಯವರ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಬಿ.ಎಚ್ ರಸ್ತೆಗೆ ಹೆಸರಿಡಬೇಕು ಎಂಬ ಚರ್ಚೆ ಕೇಳಿಬಂದಿತ್ತು. ಅದು ನೇರವೇರಿದ ಹಿನ್ನೆಲೆಯಲ್ಲಿ ಶ್ರೀಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸ ಬೇಕು ಎಂಬ ವಿಚಾರ ಚರ್ಚೆಗೆ ಮುನ್ನೆಲೆಗೆ ಬಂದಿದೆ.
ಸಾರ್ವಜನಿಕರ ಆಗ್ರಹ ಮತ್ತು ಒತ್ತಾಸೆಯ ಮೇರೆಗೆ ಎಸ್ಎಸ್ ಸರ್ಕಲ್ನಲ್ಲಿ ಸ್ವಾಮೀಜಿಯವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿಯವರು ಹೇಳಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುವ ಉದ್ಯಾನವನ, ಪ್ರತಿಮೆ ನಿರ್ಮಾಣಕ್ಕೆ ಜನಾಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದರು.
ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಎತ್ತರ ಎಷ್ಟಿರಬೇಕು. ಯಾವ ರೀತಿಯ ಪ್ರತಿಮೆ ಸ್ಥಾಪಿಸಬೇಕು. ಉದ್ಯಾನವನದ ಮಧ್ಯ ಭಾಗದಲ್ಲಿ ಪ್ರತಿಷ್ಠಾಪಿಸ ಬೇಕೆ ಅಥವಾ ಕೊನೆಯ ಭಾಗದಲ್ಲಿ ಸ್ಥಾಪಿಸ ಬೇಕೆ ಎಂಬ ವಿಚಾರಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಜೆಸಿಎಂ ತಿಳಿಸಿದ್ದರು.

ಕಳೆದ 5 ದಶಕಗಳಿಂದ ತೀರದ ಸ್ವಾಮೀಜಿಯವರ ಪ್ರತಿಮೆಯ ಪ್ರತಿಷ್ಠಾಪನೆ ಬಯಕೆ :
ಶಂಕುಸ್ಥಾಪನೆಯಾಯಿತು, ಭೂಮಿಪೂಜೆಯಾಯಿತು 5 ವರ್ಷಗಳು ಕಳೆಯಿತು ಆದರೆ ಸ್ವಾಮೀಜಿಯವರ ಪ್ರತಿಮೆ ಮಾತ್ರ ಪ್ರತಿಷ್ಟಾಪನೆ ಯಾಗಿಲ್ಲ. ಪ್ರತಿಷ್ಠಾಪನೆ ಮಾಡಬೇಕು ಎಂಬ ವಿಚಾರಗಳೂ ಕೂಡ ಮರೆತಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೋರಹಾಕಿದ್ದಾರೆ.