ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ವೃತ್ತದಲ್ಲಿ ಸೇತುವೆ ಶಿಥಿಲಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಅವಘಡಗಳು ಸಂಭವಿಸುವ ಮುನ್ನ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಈ ಮೂಲಕ ಒತ್ತಾಯಿಸಿದ್ದಾರೆ.

ಪಟ್ಟಣದ ಹೃದಯ ಭಾಗ ಜನನಿಬಿಡ ದಬ್ಬೇಘಟ್ಟ ವೃತ್ತದಲ್ಲಿ ಸುಮಾರು ದಿನಗಳಿಂದ ಸೇತುವೆ ಮುರಿದು ಬಿದ್ದಿದ್ದು, ಇಲಾಖಾಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಹೆಚ್ಚು ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಹಾಗೂ ಜನರು ಓಡಾಡುತ್ತಾರೆ. ಆಗ ದ್ವಿಚಕ್ರ ವಾಹನಗಳು ತೆರೆದ ಸೇತುವೆಗೆ ಸಿಲುಕಿ ಹಲವು ಬಾರಿ ಅಪಘಾತಗಳು ನಡೆದಿವೆ.
ಸಾರಿಗೆ ಬಸ್ಸುಗಳು ಕಾರು, ಟ್ರಕ್ಕುಗಳು ಸಂಚರಿಸುವಾಗ ದೊಡ್ಡ ಅಪಘಾತಗಳು ಸಂಭವಿಸಬಹುದಾಗಿದೆ. ಈಗಾಗಲೇ ಅದೆಷ್ಟೋ ಬಾರಿ ಪಟ್ಟಣ ಪಂಚಾಯಿತಿ ತಾತ್ಕಾಲಿಕವಾಗಿ ಸಂಚರಿಸುವOತೆ ಸೇತುವೆಗೆ ಕಲ್ಲು-ಮಣ್ಣು ಸುರಿದು ಮುಚ್ಚಿದರೂ ಪ್ರಯೋಜನವಿಲ್ಲದಂತಾಗಿದೆ. ಈಗಾಗಲೇ ವೃದ್ದರಾದಿಯಾಗಿ ಅನೇಕರು ಬಿದ್ದೆದ್ದ ಘಟನೆಗಳು ಕಣ್ಣಮುಂದೆಯೇ ನಡೆದ ಉದಾಹರಣೆಗಳಿವೆ. ಕೂಡಲೇ ಪಟ್ಟಣ ಪಂಚಾಯಿತಿ ಶಾಶ್ವತ ಸೇತುವೆ ನಿರ್ಮಾಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಈ ಮೂಲಕ ಒತ್ತಾಯಿಸಿದ್ದಾರೆ.