ಬಾಗಲಕೋಟೆ: ಅಂಗನವಾಡಿಗೆ ಹೋಗಿದ್ದ 3 ವರ್ಷದ ಮಗುವಿಗೆ ಜಾಕು ಇರಿದು ಸ್ವಂತ ಚಿಕ್ಕಪ್ಪನೇ ಜೀವ ತೆಗೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಬೆನಕನವಾಡಿ ಗ್ರಾಮದಲ್ಲಿ ನಡೆದಿದೆ. ಅಣ್ಣ ಬೈದು ಬುದ್ಧಿವಾದ ಹೇಳಿದ್ದಕ್ಕೆ ತಮ್ಮ ಈ ಕೃತ್ಯ ಎಸಗಿದ್ದಾನೆ. ಬೆನಕನವಾಡಿ ಗ್ರಾಮದ ಮಾರುತಿ ವಾಲಿಕಾರ ಎಂಬುವರ 3 ವರ್ಷದ ಮಧುಕುಮಾರನ ಜೀವವನ್ನ ಚಿಕ್ಕಪ್ಪ ಭೀಮಪ್ಪ ತೆಗೆದಿದ್ದಾನೆ. ಬಾಲಕ ಮುಂಜಾನೆ ಎಂದಿನಂತೆ ಗ್ರಾಮದ ಅಂಗನವಾಡಿಗೆ ಹೋಗಿದ್ದ. ಎಲ್ಲರೊಂದಿಗೆ ಅಂಗನವಾಡಿಯಲ್ಲಿ ಕುಳಿತ್ತಿದ್ದ ಬಾಲಕನನ್ನ ಚಿಕ್ಕಪ್ಪ ಭೀಮಪ್ಪ ನೇರವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ನೆಲದ ಮೇಲೆ ಮಗುವನ್ನ ಹಾಕಿ ಹರಿತವಾದ ಆಯುಧದಿಂದ ಕುತ್ತಿಗೆ ಕೊಯ್ದಿದ್ದಾನೆ. ನೋವಿನಿಂದ ಮಗು ಚೀರಾಟದಿಂದ ಕ್ಷಣಾರ್ಧದಲ್ಲಿ ಜೀವ ಬಿಟ್ಟಿದೆ.

ಬೆಳಿಗ್ಗೆ 9 ಗಂಟೆಗೆ ಮಗು ಮದುಕುಮಾರ ತಂದೆ ತಾಯಿ ಹತ್ತಿ ಹೊಲಕ್ಕೆ ಕೆಲಸಕ್ಕೆ ಹೋಗಿದ್ದರು. ಮದುಕುಮಾರ ಅಜ್ಜನ ಜೊತೆ ಅಂಗನವಾಡಿಗೆ ಹೋಗಿದ್ದ. ಖುಷಿ ಖುಷಿಯಿಂದ ಅಂಗಡಿಗೆ ಹೋಗಿ ಚಾಕಲೇಟ್ ತಿನ್ನುತ್ತಾ ಮಗು ಅಜ್ಜನ ಜೊತೆ ಅಂಗನವಾಡಿಗೆ ಹೋಗಿತ್ತು. ಆದರೆ ಅಂಗನವಾಡಿ ಇನ್ನು ತೆರೆದಿರಲಿಲ್ಲ.ನಂತರ ಅಜ್ಜನ ಬಿಟ್ಟು ಸ್ನೇಹಿತರೊಂದಿಗೆ ಮದುಕುಮಾರ ಆಟವಾಡುತ್ತಿದ್ದ. ಆ ವೇಳೆ ಮದುಕುಮಾರನನ್ನು ಮನೆಗೆ ಕರೆದೊಯ್ದ ಪಾಪಿ ಭೀಮಪ್ಪ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ . ಮುದ್ದಾದ ಮಗು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಮದುಕುಮಾರ ತಂದೆ ಮಾರುತಿ , ಮಾರುತಿ ವಾಲಿಕಾರನ ಡೊಡ್ಡಪ್ಪನ ಮಗ ಭೀಮಪ್ಪ. ಭೀಮಪ್ಪನ ತಮ್ಮನ ಪತ್ನಿ ಹಾಗೂ ಮಾರುತಿ ಪತ್ನಿ ಸಹೋದರಿಯರು.ಇಷ್ಟೊಂದು ಹತ್ತಿರದ ಸಂಬಂಧವಿದೆ. ಆದರೆ ಚಿಕ್ಕಪ್ಪನೇ ಇಂತಹ ದುಷ್ಕೃತ್ಯವೆಸಗಿ ಪೈಶಾಚಿಕತೆ ಮೆರೆದಿದ್ದಾನೆ. ಘಟನೆ ಇಂದಿಗೂ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಅಮೀನಗಢ ಪೊಲೀಸರು ಪಾಪಿ ಭೀಮಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸಿಟ್ಟು ಬಂತು ಕೊಲೆ ಮಾಡಿದೆ ಅಂತ ಮಾತ್ರ ಹೇಳಿದ್ದಾನೆ . ಆದರೆ ಕಳೆದ ವರ್ಷ ಭೀಮಪ್ಪ ತನ್ನ ಪತ್ನಿ ಜೊತೆ ಜಗಳವಾಡಿ ಗುಂಡುಕಲ್ಲಿನಿಂದ ಹಲ್ಲೆ ಮಾಡಿದ್ದನಂತೆ.ಆಗ ಮಗು ಮದುಕುಮಾರ ತಂದೆ ಮಾರುತಿ ಭೀಮಪ್ಪನಿಗೆ ಬೈದು ಬುದ್ದಿ ಹೇಳಿದ್ದನಂತೆ.ಅದೇ ಸೇಡಿಟ್ಟುಕೊಂಡು ಹೀಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.