ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮಕ್ಕೆ ಅಗತ್ಯವಾಗಿ ಬೇಕಾಗಿರುವ ಹತ್ತಾರು ಎಕರೆ ಜಾಗದ ಕುರಿತು ಮಹತ್ವದ ಸಭೆ ಇಂದು ನಡೆಯಲಿದೆ. ಮೆಟ್ರೋ ನಿಲ್ದಾಣಗಳು ಅಭಿವೃದ್ಧಿ ಸೇರಿದಂತೆ ಬಹುಮಾದರಿ ಸಾರಿಗೆ ಕೇಂದ್ರ ಆಗಲಿರುವ ಹೆಬ್ಬಾಳದ ಜಾಗ ಈ ಬಾರಿಯ ಸಭೆ ಬಳಿಕವಾದರೂ BMRCL ಗೆ ನೀಡಲು ಅನುಮತಿ ದೊರೆಯುತ್ತಾ? ಎಂದು ಕಾದು ನೋಡಬೇಕಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದ ಸಭೆ ನಮ್ಮ ಮೆಟ್ರೋಗೆ ನಿರ್ಣಾಯಕ ಅಂತಲೂ ಹೇಳಬಹುದು.

ಈ ಹಿಂದೆ ಸಾಕಷ್ಟು ಸಭೆಗಳು ಹೆಬ್ಬಾಳದಲ್ಲಿನ 45 ಎಕರೆ ಜಾಗದ ಕುರಿತು ನಡೆದಿವೆ. ಇತ್ತೀಚೆಗೆ ಮೂಲಸೌಕರ್ಯ ಹಾಗೂ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಆದರೆ ಮಹತ್ವದ ಯಾವ ನಿರ್ಧಾರಗಳನ್ನು ಕೈಗೊಳ್ಳಲಾಗಿಲ್ಲ. ಇಂದಲ್ಲ ನಾಳೆ ಈ ಭೂಮಿ ಹಸ್ತಾಂತರ ಆಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಾಯುತ್ತಿದೆ.
ಈ 45 ಎಕರೆ ಭೂಮಿಯ ಭವಿಷ್ಯದ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಉನ್ನತ ಮಟ್ಟದ ಸಭೆ ಜರುಗಲಿದೆ. ಕಳೆದ 08 ತಿಂಗಳಲ್ಲಿ ಇದು ಮೂರನೇ ಸಭೆಯಾಗಿದೆ. ಸಚಿವ ಎಂ.ಬಿ. ಪಾಟೀಲ್ ಹಾಗೂ ಕೈಗಾರಿಕೆ ಇಲಾಖೆ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
KIADB ಸುಪರ್ದಿಯಲ್ಲಿರುವ ಹೆಬ್ಬಾಳದ 45 ಎಕರೆ ಜಾಗದ ಕುರಿತು ಬಿಎಂಆರ್ಸಿಎಲ್ ಔಪಚಾರಿಕವಾಗಿ ಭೂಮಿ ನೀಡುವಂತೆ ಮನವಿ ಮಾಡಿಕೊಂಡಿತ್ತು. ಈ ಜಾಗವನ್ನು ಭೂಮಾಲೀಕರಿಂದ ಪಡೆದಿದ್ದು, ಅವರಿಗೆ ಪರಿಹಾರ ನೀಡುವ ಪ್ರಸ್ತಾಪ ಇದೆ. ಆ ಹಣ ಮೆಟ್ರೋ ನೀಡಲು ಅಂತಲೂ ಹಿಂದಿನ ಸಭೆಯಲ್ಲಿ ಮೌಖಿಕವಾಗಿ ಸಚಿವರು ಮಾತನಾಡಿದ್ದರು. ಆದರೆ ಪರಿಹಾರ ವಿತರಣೆಯಲ್ಲಿನ ಈಗಾಗಲೇ ನಡೆದ ವಿಳಂಬ ಹಾಗೂ ಲಿಖಿತ ಪ್ರತಿಕ್ರಿಯೆಗಳು ಸಿಗದ ಹಿನ್ನೆಲೆ ಕೋಟ್ಯಂತರ ರೂಪಾಯಿ ಹಣ ಒದಗಿಸುವುದು ಸರಿಯಲ್ಲ ಎಂದು ಸುಮ್ಮನಾಯಿತು.