12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ.
ಬೆಂಗಳೂರು : ಕ್ಯಾನ್ಸರ್ ಪೀಡಿತ ಗಂಡನ ಚಿಕಿತ್ಸೆ ಖರ್ಚಿಗೆಂದು ಕೆಲಸ ಮಾಡ್ತಿದ್ದ ಮನೆಯಲ್ಲಿಯೇ ಹೆಂಡತಿಯೋರ್ವಳು ಬೆಳ್ಳಿ ಕದ್ದಿರುವ ಘಟನೆ ಸಂಬಂಧ ಜೀವನ ಭೀಮಾನಗರ ಪೊಲೀಸರು ಚೈತ್ರಾ ಎಂಬಾಕೆಯನ್ನು ಬಂಧಿಸಿದ್ದಾರೆ. ಪ್ರತಿಷ್ಟಿತ ಆಸ್ಪತ್ರೆ ಒಂದರಲ್ಲಿ ಸರ್ಜನ್ ಆಗಿದ್ದವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ, ಹಂತ ಹಂತವಾಗಿ ಒಂದೊಂದೇ ಬೆಳ್ಳಿ ಪಾತ್ರೆಯಂತೆ ಒಟ್ಟು ಒಟ್ಟು 12.5 ಕೆಜಿ ಬೆಳ್ಳಿ ದೋಚಿದ್ದಳು. ಈಕೆಯ ಗಂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಖರ್ಚಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಈಕೆ ಕಳ್ಳತನಕ್ಕೆ ಇಳಿದಿದ್ದಳು ಎನ್ನಲಾಗಿದೆ.
ಮಹಡಿ ಮೇಲೆ ಕೆಲ ಬೆಳ್ಳಿ ಸಾಮಗ್ರಿಗಳ ಕೂಡಿಟ್ಟಿದ್ದ ಮನೆಯವರು, ಹಬ್ಬದ ಸಂದರ್ಭದಲ್ಲಿ ಮಾತ್ರ ಆ ಪಾತ್ರೆಗಳನ್ನ ಉಪಯೋಗ ಮಾಡುತ್ತಿದ್ದರು. ಈ ಹಿನ್ನೆಲೆ ಅವುಗಳನ್ನು ಒಂದೊಂದಾಗಿ ಎಗರಿಸಿದ್ದ ಚೈತ್ರಾ, ಅವನ್ನು ಅಡವಿಟ್ಟು ಹಣ ಪಡೆದು ಬಳಕೆ ಮಾಡುತ್ತಿದ್ದಳು. ನಂತರ ಅನುಮಾನ ಬಾರದಂತೆ ಬಂದು ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ದೀಪಾವಳಿ ಹಬ್ಬದ ನಂತರ ಆಕೆ ಕೆಲಸ ಬಿಟ್ಟಿದ್ದು, ದಸರಾ ಹಬ್ಬಕ್ಕೆ ಬೇಕೆಂದು ಪಾತ್ರೆ ಚೀಲ ಓಪನ್ ಮಾಡಿದ್ದ ಮನೆಯವರು ಶಾಕ್ ಆಗಿದ್ದಾರೆ. ಈ ವೇಳೆ ಬೆಳ್ಳಿ ಪಾತ್ರೆಗಳು, ಪೂಜಾ ಸಾಮಗ್ರಿಗಳು ಕಾಣೆಯಾಗಿರೋದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಅವರು ನೀಡಿದ್ದ ದೂರಿನ ಅನ್ವಯ ತನಿಖೆಗೆ ಮುಂದಾದ ಪೊಲೀಸರು, ಅನುಮಾನಗೊಂಡು ಮನೆ ಕೆಲಸದವರ ವಿಚಾರಣೆ ನಡೆಸಿದ್ದಾರೆ. ಚೈತ್ರಾಳ ವಿಚಾರಣೆ ವೇಳೆ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ಸತ್ಯ ಬಯಲಾಗಿದ್ದು, ಬಂಧಿತಳಿಂದ 35 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
For More Updates Join our WhatsApp Group :




