ಬೆಂಗಳೂರು: ಒಂದೆಡೆ ಹಾಸನ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಯುವ ಜನಾಂಗ ಹೃದಯಾಘಾತದಿಂದ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದರೆ, ಮತ್ತೊಂದೆಡೆ ಇದೀಗ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಗಂಭೀರವಾದ ಕಾರಣವೊಂದನ್ನು ಜಯದೇವ ಆಸ್ಪತ್ರೆಯ ತಜ್ಞರು ಕಂಡುಕೊಂಡಿದ್ದಾರೆ. ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿರುವ ತಜ್ಞರು, ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ. ಈ ವರದಿಯಿಂದ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಸುಲಭವಾಗಿ ಸಿಗುತ್ತದೆ ಎಂದು ಸ್ತ್ರೀಯರು ತೆಗೆದುಕೊಳ್ಳುವ ಗರ್ಭನಿರೋಧಕ ಮಾತ್ರೆ ಕೂಡ ಜೀವಕ್ಕೆ ಕುತ್ತು ತರಬಹುದು. ಈ ಗುಳಿಗೆ ಸೇವನೆ ಕೂಡ ಮಹಿಳೆಯರಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ಜಯದೇವ ತಜ್ಞರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮಹಿಳೆಯರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಯುವ ವಯಸ್ಕರೇ ಹೆಚ್ಚು ಬಲಿಯಾಗುತ್ತಿದ್ದಾರೆ. ಗರ್ಭ ನಿರೋಧಕ ಮಾತ್ರೆ ಸೇವನೆ ಕೂಡ ಮಹಿಳೆಯರ ಹೃದಯಸ್ಥಂಭನಕ್ಕೆ ಕಾರಣವಾಗುತ್ತಿದೆ. ಗರ್ಭ ನಿರೋಧಕ ಔಷಧಗಳ ಬಳಕೆಯಿಂದ ಮಹಿಳೆಯರಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಕಂಡು ಬರುತ್ತಿದೆ. ಇದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ತಜ್ಞರು ಹೇಳಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.




