ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಮಳೆರಾಯನ ಆರ್ಭಟ ತಗ್ಗಿದ್ದು, ಇನ್ನೂ ಕೆಲವೆಡೆ ಮಾತ್ರ ಅಬ್ಬರಿಸಿ ಬೊಬ್ಬರೆಯುತ್ತಿದ್ದಾನೆ. ಹಾಗೆಯೇ ಸೆಪ್ಟೆಂಬರ್ 11ರ ವರೆಗೂ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರೀ ಮಳೆ ಮುನ್ಸೂನೆ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ ಇಂದು (ಸೆಪ್ಟೆಂಬರ್ 09) ಆಂಧ್ರ ಪ್ರದೇಶದ, ಪೂರ್ವ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ, ತೆಲಾಂಗಣಕ್ಕೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈಗಾಗಲೇ ವಿಜಯವಾಡದ ಹಲವೆಡೆ ಭಾರೀ ಮಳೆಯಿಂದಾಗಿ ಮನೆಗಳು ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಇದಕ್ಕೆ ಪರಿಹಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಪರಿಸ್ಥಿತಿಯನ್ನು ತಹಬದಿಗೆ ತರಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ 50 ತಂಡಗಳನ್ನು ನಿಯೋಜಿಸಲಾಗಿದೆ.
ಸೆಪ್ಟೆಂಬರ್ 11ರ ವರೆಗೆ ಗುಜರಾತ್, ಉತ್ತರಾಖಂಡ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಸೇರಿದಂತೆ ಪಶ್ಚಿಮ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆ ಈ ಭಾಗಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮತ್ತೊಂದೆಡೆ ಮುಂಗಾರು ಮಳೆಯು ಮತ್ತೆ ಪೂರ್ವ ರಾಜಸ್ಥಾನದಲ್ಲಿ ಚುರುಕು ಪಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಿಂದ ಕೆರೆ-ಕಟ್ಟೆಗಳು ತುಂಬಿ ಹರಿದು ಹವಾಂತರಗಳೇ ಸೃಷ್ಟಿಯಾಗಿವೆ. ಮತ್ತೊಂದೆಡೆ ಪ್ರಮುಖ ಹಲವುರ ಜಲಾಶಯಗಳು ಕೂಡ ಭರ್ತಿಯಾಗಿದ್ದು, ಇನ್ನೂ ಕೆಲವು ಭರ್ತಿಯಾಗುವ ಹಂತವನ್ನು ತಲುಪಿವೆ. ಅಲ್ಲದೆ, ಕೆಲವೆಡೆ ಕೃಷಿ ಬೆಳೆಗಳೆಲ್ಲವೂ ಜಲಾವೃತವಾಗಿ ರೈತರ ಜೀವನ ಹೇಳತೀರದಾಗಿದೆ. ಕೆಲವು ಭಾಗಗಳಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿ ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿದೆ. ಕಳೆದ ಬಾರಿ ಅಂದರೆ 2023ರಲ್ಲಿ ಮುಂಗಾರು ಕೈಕೊಟ್ಟಿ ಕಾರಣ ಜಲಮೂಲಗಳೆಲ್ಲವೂ ಭತ್ತಿಹೋಗುವ ಹಂತವನ್ನು ತಲುಪಿದ್ದವು. ಇನ್ನು ಇದೀಗ 2024ರಲ್ಲಿ ಜೂನ್ ಆರಂಭ ಆಗುತ್ತಿದ್ದಂತೆ ಮುಂಗಾರು ಎಂಟ್ರಿ ಕೊಟ್ಟ ಹಿನ್ನೆಲೆ ಜಲಮೂಲಗಳು ಭರ್ತಿಯಾಗಿವೆ. ಇನ್ನೂ ಕೆಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ.



