ದಕ್ಷಿಣ ಕನ್ನಡ: ರಾಘವೇಂದ್ರ ಸ್ವಾಮಿಗಳನ್ನು ನಾವು ಕಲಿಯುಗದ ಕಾಮಧೇನುವೆಂದೇ ಪೂಜಿಸುತ್ತೇವೆ. ರಾಯರನ್ನು ಶ್ರದ್ಧಾ, ಭಕ್ತಿಯಿಂದ ಯಾವ ವ್ಯಕ್ತಿ ಪೂಜಿಸುತ್ತಾನೋ ಅವನು ತನ್ನೆಲ್ಲಾ ಸಂಕಷ್ಟಗಳಿಂದ ಪರಿಹಾರವನ್ನು ಕಂಡುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಶ್ರೀಗುರು ರಾಘವೇಂದ್ರ ಸ್ವಾಮಿಯನ್ನು ಗುರುವಾರದ ದಿನದಂದು, ಆರಾಧನಾ ಮಹೋತ್ಸವದ ಸಮಯದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ.
ಹೌದು ಎಲ್ಲೆಡೆ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅತ್ಯಂತ ಪ್ರಾಚೀನ ರಾಘವೇಂದ್ರ ಸ್ವಾಮಿಯ ಕ್ಷೇತ್ರವಾದ ಕಲ್ಲಾರೆ ರಾಘವೇಂದ್ರ ಮಠದಲ್ಲಿ ಈ ಆರಾಧನೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ರಾಯರ ಆರಾಧನೆಯಲ್ಲಿ ಎರಡನೇ ದಿನದ ಆರಾಧನೆ ಸಂಪನ್ನಗೊಂಡಿದೆ.
ಎರಡನೇ ದಿನದ ಆರಾಧನೆ
ರಾಯರ ಆರಾಧನೆಯಲ್ಲಿ ಎರಡನೇ ದಿನದ ಆರಾಧನೆಗೆ ಅತ್ಯಂತ ಮಹತ್ವವಿರುವ ಹಿನ್ನಲೆಯಲ್ಲಿ ಭಾರೀ ಸಂಖ್ಯೆಯ ಭಕ್ತಾಧಿಗಳು ರಾಘವೇಂದ್ರ ಮಠದಲ್ಲಿ ಸೇರಿದ್ದರು. ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ರಾಯರಿಗೆ ನಡೆಯುವ ಬಹುತೇಕ ಸೇವೆಗಳನ್ನು ಇಲ್ಲಿ ನೆರವೇರಿಸಲಾಗುತ್ತಿರುವುದು. ಇದೇ ಇಲ್ಲಿನ ವಿಶೇಷ.
ರಾಘವೇಂದ್ರ ಸ್ವಾಮಿಯ ಪಾದಪೂಜೆ, ಅಭಿಷೇಕ, ಭಜನಾ ಸಂಕೀರ್ತನೆ ಮತ್ತು ರಾತ್ರಿ ವೇಳೆ ರಾಯರ ಬಂಡಿ ಉತ್ಸವವನ್ನೂ ಇಲ್ಲಿ ನಡೆಸಲಾಗುತ್ತದೆ. ಮಂತ್ರಾಲಯದ ರಾಘವೇಂದ್ರ ಮಠದ ಸ್ವಾಮೀಜಿಗಳು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪುತ್ತೂರಿನ ಈ ಕ್ಷೇತ್ರಕ್ಕೂ ಭೇಟಿ ನೀಡಿರುತ್ತಾರೆ.
ಇನ್ನು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ರಾಯರ ಆರಾಧನಾ ಮಹೋತ್ಸವವನ್ನು ನೆರವೇರಿಸಲಾಗುತ್ತದೆ. ಈ ದಿನವು ರಾಯರು ಸ್ವಇಚ್ಛೆಯಿಂದ ಜೀವಂತ ಸಮಾಧಿಯನ್ನು ತೆಗೆದುಕೊಂಡ ದಿನವನ್ನು ಪ್ರತಿನಿಧಿಸುತ್ತದೆ. ಈ ಬಾರಿ ರಾಯರ ಆರಾಧನಾ ಮಹೋತ್ಸವವು 354ನೇ ಆರಾಧನಾ ಮಹೋತ್ಸವವಾಗಿರುತ್ತದೆ. ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದ್ರು.