ಬಡವರಿಗೆ ನೀಡಬೇಕಿದ್ದ ಅಕ್ಕಿ ದಂಧೆಕೋರರ ಕೈಗೆ.
ಬೆಂಗಳೂರು : ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯ ಅಕ್ಕಿ ದಂಧೆಕೋರರ ಬುಟ್ಟಿ ಸೇರುತ್ತಿದೆ. ಯಲಚೇನಹಳ್ಳಿ ಕಾಂಗ್ರೆಸ್ ಮುಖಂಡ ಅಲೀಮ್ ಬಿಪಿಎಲ್ ಕಾರ್ಡ್ ದಾರರಿಂದ ಕಡಿಮೆ ಬೆಲೆಗೆ ಅಕ್ಕಿ ಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಕೆಆರ್ಎಸ್ ಪಾರ್ಟಿ ಆರೋಪ ಮಾಡಿದೆ. ಅಕ್ಕಿ ಸಾಗಾಟ ಮಾಡುವ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿದ್ದ ಕೆಆರ್ಎಸ್ ಮುಖಂಡರು ಅಕ್ಕಿ ಸಮೇತ ಗಾಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ದಂಧೆ ಹಿಂದೆ ಕಾಂಗ್ರೆಸ್ ಮುಖಂಡ ಅಲೀಮ್ ಇದ್ದಾರೆ, ಇದನ್ನು ಬಯಲಿಗೆ ಎಳೆದ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಕೆಆರ್ಎಸ್ ಪಕ್ಷದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಅಲೀಮ್ ಸೇರಿ ನಾಲ್ವರ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಜ್ ಮಾಡಿದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆ ಪತ್ತೆ
ಸೀಜ್ ಮಾಡಲಾದ ಟೆಂಪೋದಲ್ಲಿ 45 ಚೀಲ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಇನ್ನು ಕೆಆರ್ಎಸ್ ಪಕ್ಷದ ಮುಖಂಡನ ಮನೆ ಸುತ್ತಮುತ್ತ ಅಲೀಮ್ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಲು ಯತ್ನಿಸುತ್ತಿದ್ದರು ಅಂತಲೂ ಆರೋಪ ಕೇಳಿಬಂದಿದೆ. ಬಿಡಿಎ ಕಚೇರಿಗಳಲ್ಲಿ ದಲ್ಲಾಳಿಯಾಗಿಯೂ ಅಲೀಮ್ ಕರಾಮತ್ತು ತೋರಿಸುತ್ತಿದ್ದರು ಎನ್ನಲಾಗಿದೆ.
ಯಲಚೆನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಅಲೀಮ್ ಹಾಗೂ ಕೆಆರ್ಎಸ್ ಪಕ್ಷದ ಮುಖಂಡರ ನಡುವೆ ಹಲವು ದಿನಗಳಿಂದಲೂ ತಕರಾರು ಇದ್ದು, ಅನ್ನಭಾಗ್ಯ ಅಕ್ಕಿ ಮಾರಾಟದ ಜಾಲವನ್ನು ಕೆಆರ್ಎಸ್ ಪತ್ತೆ ಮಾಡಿದ ಬಳಿಕ ಜಟಾಪಟಿ ತೀವ್ರಗೊಂಡಿದೆ. ಒಟ್ಟಾರೆ ಈ ದಂಧೆಯ ಸಾರಾಂಶವನ್ನು ಪೊಲೀಸರು ಬಯಲಿಗೆ ಎಳೆಯಬೇಕಿದೆ.
For More Updates Join our WhatsApp Group :




