ಐತಿಹಾಸಿಕ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳು; ಭಕ್ತರಲ್ಲಿ ಆಕ್ರೋಶ
ಬಳ್ಳಾರಿ : ನಗರದ ನಾಗಲಕೇರಿಯಲ್ಲಿರುವ ಐತಿಹಾಸಿಕ ವೀರ ಬಾಲಾಂಜನೇಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರ ಬೆಳಿಗ್ಗೆ 5:30 ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಅರ್ಚಕರು , ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ, ನೂರಾರು ಭಕ್ತರು ದೇವಸ್ಥಾನದ ಬಳಿ ಜಮಾಯಿಸಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ದೇವಸ್ಥಾನದ ಪ್ರಾಂಗಣದಲ್ಲಿ ಮಾಂಸ ಪತ್ತೆಯಾದ ಘಟನೆಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳ ಮುಖಂಡರ ಪ್ರಕಾರ, ಇದು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ದುಷ್ಕರ್ಮಿಗಳು ನಡೆಸಿರುವ ಕೃತ್ಯವಾಗಿದೆ. ಪತ್ತೆಯಾದ ಮಾಂಸವು ಗೋಮಾಂಸದ ತುಂಡುಗಳೆಂದು ಹೇಳಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಘಟನೆ ನಡೆದಿರುವ ಕುರಿತು ತನಿಖೆ ಕೈಗೊಂಡಿದ್ದಾರೆ. ಹಿಂದೂಪರ ಸಂಘಟನೆಗಳ ಮುಖಂಡರು ನೀಡಿರುವ ಹೇಳಿಕೆ ಪ್ರಕಾರ, “ಇದು ಬೀದಿ ನಾಯಿಗಳು ತಂದು ಹಾಕಿದಲ್ಲ, ನಾಯಿಗಳು ಮಾಂಸದ ಕವರ್ ಅನ್ನು ಅಷ್ಟು ನೀಟಾಗಿ ತಂದು ಇಡಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಈ ಘಟನೆಯ ಕುರಿತು 24 ಗಂಟೆಗಳ ಒಳಗಾಗಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ. ಇನ್ನು ಕೆಲವು ಸ್ಥಳಿಯರು ಇದು ಮನುಷ್ಯರು ಮಾಡಿದ ಕೃತ್ಯ ಅಲ್ಲ. ನಾವು 40-45 ವರ್ಷದಿಂದ ನೋಡ್ತಿದ್ದೇವೆ. ಎಲ್ಲರೂ ಪ್ರತೀ ದಿನ ಪೂಜೆ ಮಾಡ್ತೇವೆ. ಇದು ಐತಿಹಾಸಿಕ ದೇವಸ್ಥಾನವಾಗಿದೆ. ಪ್ರತೀ ವರ್ಷ ರಾಮನವಮಿ ಸೇರಿದಂತೆ ಎಲ್ಲಾ ಹಬ್ಬ ಆಚರಣೆ ಮಾಡ್ತೇವೆ. ಈ ಮಾಂಸವನ್ನು ನಾಯಿ ಅಥವಾ ಬೆಕ್ಕು ತಂದು ಹಾಕಿರಬಹುದು. ಈ ಬಗ್ಗೆ ಸೂಕ್ತ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
For More Updates Join our WhatsApp Group :




