ಡಿಜಿಪಿ ಅಲೋಕ್ ಕುಮಾರ್ ಸೂಚನೆ: ಎಲ್ಲಾ ಕೈದಿಗಳಿಗೆ ಮಾದಕ ವಸ್ತು ಟೆಸ್ಟ್.
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈಗಾಗಲೇ ರಾಜ್ಯದ ಶೇ10 ಕೈದಿಗಳಿಗೆ ಟೆಸ್ಟ್
ಪರಪ್ಪನ ಅಗ್ರಹಾರದಲ್ಲಿ ಮಾರ್ಚ್ 9 ರಂದು ಸಿಬ್ಬಂದಿಯೇ ತನ್ನ ಒಳುಡುಪಿನಲ್ಲಿ ಮಾದಕ ವಸ್ತುಗಳನ್ನು ಜೈಲಿನೊಳಗೆ ತಂದ ಘಟನೆ ನಡೆದಿತ್ತು. ಇದೊಂದೇ ಅಲ್ಲದೆ ಹಲವು ಬಾರಿ ರಾಜ್ಯದ ಜೈಲುಗಳಲ್ಲಿ ಈ ರೀತಿಯ ಅಕ್ರಮಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಡ್ರಗ್ಸ್ ಮುಕ್ತ ಕಾರಾಗೃಹ ನಿರ್ಮಾಣ ಮಾಡುವ ಗುರಿಯಿಂದ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಈ ಯೋಜನೆಯಡಿ ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಹೆರೊಯಿನ್, ಕೊಕೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಮೊದಲ ಹಂತದಲ್ಲಿ ಎಲ್ಲಾ ಜೈಲುಗಳಲ್ಲಿ ಸುಮಾರು ಶೇ10ರಷ್ಟು ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾರಾಗೃಹ ಇಲಾಖೆ ನೀಡಿರುವ ವಿಶೇಷ ಕಿಟ್ಗಳ ಮೂಲಕ ಜೈಲು ವೈದ್ಯಾಧಿಕಾರಿಗಳು ಈ ಪರೀಕ್ಷೆಗಳನ್ನು ಮಾಡುತ್ತಿದ್ದಾರೆ.
ಮಾದಕ ವಸ್ತು ಸೇವನೆ ಪತ್ತೆಯಾದರೆ ಕೌನ್ಸೆಲಿಂಗ್
ಪರೀಕ್ಷೆಯಲ್ಲಿ ಕೈದಿಗಳು ಮಾದಕ ವಸ್ತು ಸೇವಿಸಿರುವುದು ಪತ್ತೆಯಾದರೆ ತಕ್ಷಣವೇ ಅವರಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಹೆಚ್ಚು ಅಡಿಕ್ಟ್ ಆಗಿರುವ ಕೈದಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಮಾಡಲಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಪತ್ತೆಯಾದ ಕೈದಿಗಳ ಮೇಲೆ ಸದ್ಯಕ್ಕೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಲಿಗೆ ಕೌನ್ಸೆಲಿಂಗ್ ಮತ್ತು ಚಿಕಿತ್ಸೆಯ ಮೂಲಕ ಕೈದಿಗಳನ್ನು ಸರಿಯಾದ ದಾರಿಗೆ ತರಲು ಕಾರಾಗೃಹ ಇಲಾಖೆ ಮುಂದಾಗಿದೆ.
For More Updates Join our WhatsApp Group :




