ಲಕ್ಷಾಂತರ ಮೊಟ್ಟೆಗಳು ಮಣ್ಣುಪಾಲು; ಕೋಳಿ ಫಾರ್ಮ್ ಮಾಲೀಕರಿಗೆ ನಷ್ಟ.
ಬೆಂಗಳೂರು: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಸಿಲಿಂಡರ್ ಕೊರತೆ ಜೊತೆಗೆ ಉತ್ತರ ಕರ್ನಾಟಕದ ಮೊಟ್ಟೆ ಉದ್ಯಮದ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಯಾದಗಿರಿ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಮೊಟ್ಟೆಗಳ ವ್ಯಾಪಾರ ಬಹುತೇಕ ಸ್ಥಗಿತಗೊಂಡಿದ್ದು, ಇದರಿಂದ ಕೋಳಿ ಫಾರ್ಮ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾವೇರಿಯ ಮೊಟ್ಟೆ ವ್ಯಾಪಾರದಲ್ಲಿ ಭಾರೀ ನಷ್ಟ
ಹಾವೇರಿಯಲ್ಲಿ ಪ್ರತಿದಿನ ಭಾರತದಿಂದ ಸುಮಾರು 80 ಲಕ್ಷ ಮೊಟ್ಟೆಗಳು ವಿದೇಶಗಳಿಗೆ ರಫ್ತು ಆಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆ ಆಮದು-ರಫ್ತು ವ್ಯವಹಾರ ಸ್ಥಗಿತಗೊಂಡಿರುವುದರಿಂದ ಮೊಟ್ಟೆಗಳ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಮೊದಲು ಒಂದು ಮೊಟ್ಟೆ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಈಗ 4 ರೂಪಾಯಿಗೆ ಮಾತ್ರ ಮಾರಾಟವಾಗುತ್ತಿದೆ ಎಂದು ಪೌಲ್ಟ್ರಿ ಫಾರ್ಮ್ ಮಾಲೀಕರು ತಿಳಿಸಿದ್ದಾರೆ.
ಕೊಪ್ಪಳ, ಯಾದಗಿರಿಯಲ್ಲೂ ಮೊಟ್ಟೆ ಮಾರುಕಟ್ಟೆ ಕುಸಿತ
ಕೊಪ್ಪಳ ಜಿಲ್ಲೆಯಲ್ಲಿ ಪ್ರತಿದಿನ ಸುಮಾರು 40 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿದ್ದು, ರಫ್ತು ನಿಂತಿರುವ ಕಾರಣ ಸಾವಿರಾರು ಮೊಟ್ಟೆಗಳು ಮಾರಾಟವಾಗದೆ ಉಳಿಯುತ್ತಿವೆ. ಕೆಲವು ಫಾರ್ಮ್ಗಳಲ್ಲಿ ಮಾರಾಟವಾಗದ ಮೊಟ್ಟೆಗಳನ್ನು ಗುಂಡಿ ತೋಡಿ ಹೂತು ಹಾಕಲಾಗುತ್ತಿದೆ. ಪ್ರತಿ ಫಾರ್ಮ್ಗೆ ದಿನಕ್ಕೆ 1 ರಿಂದ 1.5 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲೆಯಿಂದಲೂ ಕತಾರ್, ಕುವೈತ್, ಸೌದಿ ಹಾಗೂ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ಲಕ್ಷಾಂತರ ಮೊಟ್ಟೆಗಳು ರಫ್ತು ಆಗುತ್ತಿತ್ತು. ಆದರೆ ರಫ್ತು ನಿಂತಿರುವ ಕಾರಣ ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
For More Updates Join our WhatsApp Group :




